ಶ್ರೀನಗರ/ಜಮ್ಮು: ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಬುಧವಾರ ಸಂಜೆ ಭೀಕರ ಹತ್ಯೆ ಯತ್ನ ನಡೆದಿದೆ. ಜಮ್ಮುವಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ದುಷ್ಕರ್ಮಿಯೊಬ್ಬ ತೀರಾ ಹತ್ತಿರದಿಂದ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆದರೆ ಎನ್ಎಸ್ಜಿ ಕಮಾಂಡೋಗಳ ತಕ್ಷಣದ ಚಾಕಚಕ್ಯತೆಯಿಂದ ಗುಂಡು ಗುರಿ ತಪ್ಪಿದ್ದು, ಅಬ್ದುಲ್ಲಾ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದ ರಾಯಲ್ ಪಾರ್ಕ್ ಸಮೀಪ ಈ ಘಟನೆ ನಡೆದಿದೆ. 88 ವರ್ಷದ ಫಾರೂಕ್ ಅಬ್ದುಲ್ಲಾ ಮದುವೆ ಸಮಾರಂಭದಲ್ಲಿದ್ದ ವೇಳೆ, ಅವರ ಬೆನ್ನ ಹಿಂದೆ ನಿಂತಿದ್ದ ವ್ಯಕ್ತಿಯೊಬ್ಬ ಪಿಸ್ತೂಲ್ನಿಂದ ಗುಂಡು ಹಾರಿಸಲು ಮುಂದಾದನು. ಆದರೆ ಎಚ್ಚೆತ್ತ ಎನ್ಎಸ್ಜಿ ಕಮಾಂಡೋಗಳು ದಾಳಿಕೋರನನ್ನು ತಳ್ಳಿದ ಪರಿಣಾಮ ಗುಂಡು ಗುರಿ ತಪ್ಪಿದೆ. ಈ ರೋಮಾಂಚಕಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ತಿಳಿದುಬಂದಿದೆ.
ದಾಳಿಕೋರನನ್ನು ಜಮ್ಮುವಿನ ಪುರಾಣ ಮಂಡಿ ನಿವಾಸಿ ಕಮಲ್ ಸಿಂಗ್ ಜಮ್ವಾಲ್ (65) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಅವನನ್ನು ತಕ್ಷಣವೇ ವಶಕ್ಕೆ ಪಡೆದು ಬಂಧಿಸಲಾಗಿದೆ. ಬಂಧನದ ನಂತರ “ಈ ಕ್ಷಣಕ್ಕಾಗಿ ನಾನು ಕಳೆದ 20 ವರ್ಷಗಳಿಂದ ಕಾಯುತ್ತಿದ್ದೆ” ಎಂದು ಹೇಳಿರುವುದು ತನಿಖಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ.
ಈ ಕುರಿತು ಫಾರೂಕ್ ಅಬ್ದುಲ್ಲಾ ಅವರ ಪುತ್ರ ಹಾಗೂ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಎಕ್ಸ್ (X) ನಲ್ಲಿ ಪ್ರತಿಕ್ರಿಯೆ ನೀಡಿ, “ಅಲ್ಲಾಹನ ಕೃಪೆಯಿಂದ ತಂದೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲೋಡೆಡ್ ಪಿಸ್ತೂಲ್ ಹಿಡಿದು ವ್ಯಕ್ತಿಯೊಬ್ಬ ಇಷ್ಟು ಹತ್ತಿರಕ್ಕೆ ಹೇಗೆ ಬಂದ ಎಂಬುದು ದೊಡ್ಡ ಪ್ರಶ್ನೆ. ಎನ್ಎಸ್ಜಿ ಭದ್ರತೆಯಿದ್ದರೂ ಈ ಘಟನೆ ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಸಮಗ್ರ ತನಿಖೆ ಅಗತ್ಯ” ಎಂದು ಹೇಳಿದ್ದಾರೆ.
ಘಟನೆಯ ವೇಳೆ ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ ಹಾಗೂ ಸಲಹೆಗಾರ ನಾಸಿರ್ ಸೊಗಾಮಿ ಅವರು ಕೂಡ ಅಬ್ದುಲ್ಲಾ ಅವರ ಜೊತೆಗಿದ್ದರು. ಸದ್ಯ ಫಾರೂಕ್ ಅಬ್ದುಲ್ಲಾ ಅವರು ಸುರಕ್ಷಿತರಾಗಿದ್ದು, ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

