ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಟ್ವೀಟ್ ಮಾಡಿದ್ದಕ್ಕಾಗಿ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಪ್ರಕರಣ ದಾಖಲಾಗಿದೆ.
ತೇಜಸ್ವಿಯಾದವ್ ವಿರುದ್ಧ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಗಡ್ಚಿರೋಲಿಯ ಬಿಜೆಪಿ ಶಾಸಕ ಮಿಲಿಂದ್ ನರೋಟೆ ಅವರು ಆರ್ಜೆಡಿ ನಾಯಕನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಬಿಹಾರದ ಗಯಾಗೆ ಭೇಟಿ ನೀಡುವ ಮೊದಲು ಯಾದವ್ ಅವರು ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಕಮೆಂಟ್ ಅನ್ನು ಪೋಸ್ಟ್ ಮಾಡಿದ್ದಾರೆ ಎಂದು ನರೋಟೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೇಜಸ್ವಿ ಯಾದವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 196 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 356 (ಮಾನನಷ್ಟ), 352 (ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಮತ್ತು 353 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಅದೇ ರೀತಿ ಉತ್ತರ ಪ್ರದೇಶ ಶಹಜಹಾನ್ಪುರ ಪೊಲೀಸ್ ಠಾಣೆಯಲ್ಲೂ ಯಾದವ್ ವಿರುದ್ಧ ಬಿಜೆಪಿ ನಾಯಕಿ ಶಿಲ್ಪಿ ಗುಪ್ತಾ ಪ್ರಕರಣ ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿರುವ ಶಹಜಹಾನ್ಪುರ್ ಎಸ್ಪಿ ರಾಜೇಶ್ ದ್ವಿವೇದಿ, ನಿನ್ನೆ ಬಿಹಾರ ಮಾಜಿ ಡಿಸಿಎಂ ತೇಜಸ್ವಿ ಯಾದವ್ ವಿರುದ್ಧ ಬಿಜೆಪಿ ನಾಯಕಿ ಶಿಲ್ಪಿ ಗುಪ್ತಾ ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತೇಜಸ್ವಿ ಯಾದವ್ ವಿರುದ್ಧ ಸೆಕ್ಷನ್ 153 (2) ಮತ್ತು 197 (1), (a) ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಂಬಂಧ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ ಶುಕ್ರವಾರ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ 13,000 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಪ್ರಧಾನಿ ಮೋದಿ ಬಿಡುಗಡೆಗೆ ಮುನ್ನ ಶುಕ್ರವಾರ ಬೆಳಗ್ಗೆ ಪೋಸ್ಟ್ ಮಾಡಿದ್ದ ಯಾದವ್, ಇಂದು ಗಯಾದಲ್ಲಿ ಸುಳ್ಳು ಮತ್ತು ಘೋಷಣೆಗಳ ಮಳಿಗೆ ತೆರೆಯಲಾಗುತ್ತಿದೆ.
ಪ್ರಧಾನಿ ತಮ್ಮ ಎಲುಬಿಲ್ಲದ ನಾಲಿಯೆಲ್ಲಿ ಸುಳ್ಳು ಮತ್ತು ಘೋಷಣೆಗಳ ಬೆಟ್ಟವನ್ನು ಗಯಾದಲ್ಲಿ ಸೃಷ್ಟಿಸುತ್ತಿದ್ದಾರೆ. ಆದರೆ ದಶರಥ್ ಮಾಂಝಿಯವರ ಸುಳ್ಳುಗಳು ಮತ್ತು ಘೋಷಣೆಗಳ ಈ ಬೃಹತ್ ಪರ್ವತಗಳನ್ನು ಬಿಹಾರದ ನ್ಯಾಯಪ್ರಿಯ ಜನರು ಮುರಿಯುತ್ತಾರೆ. ನಿಮ್ಮ 11 ವರ್ಷಗಳು ಮತ್ತು ಎನ್ಡಿಎ 20 ವರ್ಷದ ಅಧಿಕಾರವನ್ನು ಬಿಡುತ್ತಾರಾ? ಎಂದಿದ್ದರು.

