ಬಳ್ಳಾರಿ : ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ಮಾಜಿ ಸಚಿವ ಶ್ರೀರಾಮುಲು ಧರಣಿ ನಡೆಸುತ್ತಿದ್ದಾರೆ. ಬಳ್ಳಾರಿ ಜಿಲ್ಲಾಸ್ಪತ್ರೆ ಮುಂದೆ ಮಾಜಿ ಸಚಿವ ಶ್ರೀರಾಮುಲು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಶ್ರೀರಾಮುಲು, ಇಂದಿನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಬಾಣಂತಿಯರ ಸರಣಿ ಸಾವುಗಳು ನಡೆದಿದ್ದರೂ ಯಾವುದೇ ಕ್ರಮವಿಲ್ಲ. ಸರ್ಕಾರ ಕಣ್ಮುತ್ತಿ ಕುಳಿತಿದೆ. ಒಂದೇ ಒಂದು ಜೀವ ಮೃತಪಟ್ಟರೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು.
ಆರೋಗ್ಯ ಸಚಿವರು ನನ್ನ ತಪ್ಪು ಇದ್ರೆ ರಾಜೀನಾಮೆ ನೀಡುತ್ತೇನೆ ಎನ್ನುತ್ತಾರೆ ನಾವು ರಾಜೀನಾಮೆ ಕೇಳುತ್ತಿಲ್ಲ. ಕೆಲಸ ಮಾಡಿ ಮೃತಕುಟುಂಬಸ್ಥರಿಗೆ ಪರಿಹಾರ ನೀಡಬೇಕಿತ್ತು. ಸಿಎಂ ಸಿದ್ದರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಸಾವಿಗೀಡಾದ ಬಾಣಂತಿಯರಿಗೆ ನ್ಯಾಯ ಸಿಗುವವರಿಗೆ ಹೋರಾಟ ಮಾಡುತ್ತೇವೆ. ಇವರು ಕೇವಲ 2 ಲಕ್ಷ ರೂ ಪರಿಹಾರ ಕೊಟ್ಡು ದೊಡ್ಡ ವಿಚಾರ ಮುಚ್ಚಿ ಹಾಕುತ್ತಿದ್ದಾರೆ. 1 ಕೋಟಿ ಪರಿಹಾರವನ್ನು ಸಾವಾಗಿರುವ ಬಾಣಂತಿಯರ ಕುಟುಂಬಕ್ಕೆ ಕೊಡಬೇಕು.
ಅಧಿವೇಶನದಲ್ಲಿ ವಿಪಕ್ಷಗಳ ಟೀಕೆ ಎದುರಿಸಲು ಈಗ ಭೇಟಿ ನಾಟಕ ಆಡಿತ್ತಿದ್ದಾರೆ. ಇತ್ತೀಚೆಗಷ್ಟೇ ಖಾಸಗಿ ಕಾರ್ಯಕ್ರಮಕ್ಕೆ ಬಳ್ಳಾರಿಗೆ ಬಂದು ಹೋಗಿದ್ದಾರೆ ಆರೋಗ್ಯ ಸಚಿವರು ಸೌಜನ್ಯಕ್ಕಾದರೂ ಬಂದು ಹೋಗಬೇಕಿತ್ತು, ಇವೆಲ್ಲಾ ಅಸಹ್ಯ ಎಂದು ಕಿಡಿ ಕಾರಿದ್ದಾರೆ.

