ನವದೆಹಲಿ: 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು ಎಂದು ಆಮ್ ಆದ್ಮಿ ಪಕ್ಷ ಘೋಷಣೆ ಮಾಡಿದೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷ (ಎಎಪಿ) ಇಂದು ಎಲ್ಲಾ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆ.
ದೆಹಲಿಯಲ್ಲಿರುವ ನಮ್ಮ ಎಲ್ಲಾ ಹಿರಿಯ ನಿವಾಸಿಗಳಿಗೆ ಅರವಿಂದ್ ಕೇಜ್ರಿವಾಲ್ ಸರ್ಕಾರದಿಂದ ಇದು ಗ್ಯಾರಂಟಿ ಯೋಜನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇಂದು ನಾನು ಹಿರಿಯ ನಾಗರಿಕರಿಗಾಗಿ ಸಂಜೀವನಿ ಯೋಜನೆಯನ್ನು ಘೋಷಿಸುತ್ತಿದ್ದೇನೆ. ಇದರಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಸೇವೆ ಸಿಗಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ಚಿಕಿತ್ಸೆಯ ವೆಚ್ಚದ ಮೇಲೆ ಯಾವುದೇ ಹೆಚ್ಚಿನ ಮಿತಿ ಇರುವುದಿಲ್ಲ. ಇದಕ್ಕೆ ನೋಂದಣಿ ಒಂದು ಅಥವಾ ಎರಡು ದಿನದಲ್ಲಿ ಪ್ರಾರಂಭವಾಗುತ್ತದೆ. ಆಪ್ ಕಾರ್ಯಕರ್ತರು ನೋಂದಣಿಗಾಗಿ ನಿಮ್ಮ ಮನೆಗೆ ಬರುತ್ತಾರೆ. ಅವರು ನಿಮಗೆ ಕಾರ್ಡ್ ನೀಡುತ್ತಾರೆ, ಅದನ್ನು ಸುರಕ್ಷಿತವಾಗಿ ಇರಿಸಿ. ನಾವು ಅಧಿಕಾರಕ್ಕೆ ಬಂದ ನಂತರ ಚುನಾವಣೆಯ ನಂತರ ಈ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
“ನಿಮ್ಮನ್ನು ನೋಡಿಕೊಳ್ಳುವುದು ಈಗ ನಮ್ಮ ಕರ್ತವ್ಯವಾಗಿದೆ. ನೀವು ದೇಶವನ್ನು ಮುನ್ನಡೆಸಲು ಶ್ರಮಿಸಿದ್ದೀರಿ” ಎಂದು ಹಿರಿಯ ನಾಗರಿಕರನ್ನು ಉದ್ದೇಶಿಸಿ ದೆಹಲಿಯ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ವಿಧಾನಸಭೆಯ ಎಲ್ಲಾ 70 ಸ್ಥಾನಗಳಿಗೆ ಆಪ್ ತನ್ನ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ತಮ್ಮ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಕೇಜ್ರಿವಾಲ್ ಖಚಿತಪಡಿಸಿದ್ದು, ಮುಖ್ಯಮಂತ್ರಿ ಅತಿಶಿ ಅವರ ಕಲ್ಕಾಜಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಭಾರತ ಚುನಾವಣಾ ಆಯೋಗ (ಇಸಿಐ) ಈ ವಾರ ಪೂರ್ವಸಿದ್ಧತಾ ಸಭೆಗೆ ಕರೆದಿರುವುದರಿಂದ ಬಹು ನಿರೀಕ್ಷಿತ ದೆಹಲಿ ಚುನಾವಣೆಯ ದಿನಾಂಕಗಳು ಶೀಘ್ರದಲ್ಲೇ ಹೊರಬೀಳಬಹುದು. ಸಭೆಯ ನಂತರ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.