ಬೆಂಗಳೂರು/ಬೆಳಗಾವಿ: ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಅಂಗೀಕರಿಸಿದ್ದ ಮಹತ್ವದ ವಿಧೇಯಕಗಳಿಗೆ ರಾಜ್ಯಪಾಲರಿಂದ ಭಾಗಶಃ ಒಪ್ಪಿಗೆ ದೊರೆತಿದ್ದು, ಎರಡು ಪ್ರಮುಖ ವಿಧೇಯಕಗಳಿಗೆ ಸಹಿ ನಿರಾಕರಿಸಲಾಗಿದೆ.
ರಾಜ್ಯ ಸರ್ಕಾರ ಬೆಳಗಾವಿ ಕಲಾಪದಲ್ಲಿ ಒಟ್ಟು 22 ವಿಧೇಯಕಗಳನ್ನು ಅಂಗೀಕರಿಸಿ, ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ರವಾನಿಸಿತ್ತು. ಈ ಪೈಕಿ 19 ವಿಧೇಯಕಗಳಿಗೆ ಮಾತ್ರ ರಾಜ್ಯಪಾಲರು ಸಹಿ ಹಾಕಿದ್ದು, ಉಳಿದ 2 ವಿಧೇಯಕಗಳನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಲಾಗಿದೆ.
ರಾಜ್ಯಪಾಲರು ಸಹಿ ಹಾಕದ ವಿಧೇಯಕಗಳಲ್ಲಿ ದ್ವೇಷ ಭಾಷಣ ತಡೆ ವಿಧೇಯಕ, ಒಳಮೀಸಲಾತಿ ವಿಧೇಯಕ ಪ್ರಮುಖವಾಗಿವೆ.
ವಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಸರ್ಕಾರ ದ್ವೇಷ ಭಾಷಣ ತಡೆ ವಿಧೇಯಕವನ್ನು ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಪಾಸ್ ಮಾಡಿತ್ತು. ಆದರೆ, ಈ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ನೀಡದೆ ವಿರೋಧ ವ್ಯಕ್ತಪಡಿಸಿದ್ದಾರೆ.
ಒಳಮೀಸಲಾತಿ ಸಂಬಂಧಿಸಿದ ವಿಧೇಯಕಕ್ಕೂ ರಾಜ್ಯಪಾಲರಿಂದ ಒಪ್ಪಿಗೆ ದೊರಕದ ಹಿನ್ನೆಲೆಯಲ್ಲಿ, ಈ ವಿಷಯ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ರಾಜ್ಯ ಸರ್ಕಾರದ 22 ವಿಧೇಯಕಗಳ ಪೈಕಿ 19ಕ್ಕೆ ಮಾತ್ರ ಅಂಕಿತ ದೊರೆತಿರುವುದು ಆಡಳಿತ ಹಾಗೂ ರಾಜಭವನ ನಡುವಿನ ಭಿನ್ನಾಭಿಪ್ರಾಯವನ್ನು ಸ್ಪಷ್ಟಪಡಿಸಿದೆ.

