ಬೆಂಗಳೂರು, ಫೆ.17: “ನಿಯತ್ತಿನ ಪ್ರಾಣಿ ಎಂದರೆ ನಾಯಿ. ಕಟ್ಟಾ ಕಾಂಗ್ರೆಸಿಗರು ಯಜಮಾನನ ಋಣ ಸ್ಮರಣೆ ಮಾಡಿಕೊಂಡು, ಅದನ್ನು ತೀರಿಸುವ ನಾಯಿಗಳು” ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆ ವಿಚಾರವಾಗಿ ಸಚಿವ ಹೆಚ್.ಸಿ. ಮಹದೇವಪ್ಪ ಅವರು “ಬಾಲ ನಾಯಿಯನ್ನೇ ಅಲ್ಲಡಿಸಬಾರದು” ಎಂದು ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದರು.
“ಅವರು ಯಾರನ್ನು ಉಲ್ಲೇಖಿಸಿ ಆ ರೀತಿಯಾಗಿ ಹೇಳಿದ್ದಾರೆ ಎಂಬ ಮಾಹಿತಿ ನನಗೆ ಇಲ್ಲ. ಕಟ್ಟಾ ಕಾಂಗ್ರೆಸಿಗರು ಬೀದಿ ನಾಯಿಗಳಲ್ಲ, ನಿಯತ್ತಿನ ನಾಯಿಗಳು” ಎಂದು ಸುರೇಶ್ ಸ್ಪಷ್ಟಪಡಿಸಿದರು.
ಹೊರಗಡೆಯಿಂದ ಬಂದವರು ಬೀದಿ ನಾಯಿಗಳೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಹಾಗೆಂದು ಹೇಳಿಲ್ಲ. ಕಟ್ಟಾ ಕಾಂಗ್ರೆಸಿಗರು ಋಣ ತೀರಿಸುವ ವ್ಯಕ್ತಿತ್ವ ಹೊಂದಿರುವವರು. ಈ ನಾಯಿಗಳು ಬೀದಿ ನಾಯಿಗಳಾಗಿರಲಿ, ಸಾಕಿದ ನಾಯಿಗಳಾಗಿರಲಿ, ಯಜಮಾನನ ಋಣ ತೀರಿಸುತ್ತವೆ. ಅದು ನಿಯತ್ತಿನ ನಾಯಿಗಳ ಸ್ವಭಾವ. ನಿಯತ್ತಿಗಾಗಿಯೇ ಜನ ನಾಯಿಗಳನ್ನು ಸಾಕುತ್ತಾರೆ. ಬೀದಿ ನಾಯಿಗೂ ಊಟ ಹಾಕುತ್ತಾರೆ. ನಾಯಿ ನಿಯತ್ತಿನ ಬಗ್ಗೆ ಅನೇಕ ಗಾದೆಗಳು, ನಾಣ್ಣುಡಿಗಳಿವೆ” ಎಂದು ತಿಳಿಸಿದರು.
ಶಾಸಕರ ವಿದೇಶ ಪ್ರವಾಸ: ಅಪಾರ್ಥ ಬೇಡ
ಶಾಸಕರ ವಿದೇಶ ಪ್ರವಾಸ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್, “ಅವರು ಶಾಸಕರಾಗಿರುವುದರಿಂದ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ನೀವು ಶಾಸಕರಾಗಿದ್ದರೆ ನಿಮ್ಮನ್ನೂ ಕರೆದುಕೊಂಡು ಹೋಗುತ್ತಾರೆ. ಕೆಲವರು ವಿಶ್ವಾಸಕ್ಕಾಗಿ ಹೋಗುತ್ತಾರೆ, ಕೆಲವರು ದೇಶ ನೋಡಲು, ಇನ್ನೂ ಕೆಲವರು ಅಧ್ಯಯನಕ್ಕಾಗಿ ಹೋಗುತ್ತಾರೆ. ಇದರಲ್ಲಿ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ. ಆಗಾಗ್ಗೆ ಶಾಸಕರು ವಿದೇಶಕ್ಕೆ ಹೋಗಿ ಬರುತ್ತಾರೆ. ಕೆಲಸದ ಒತ್ತಡಗಳ ಮಧ್ಯೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿದೇಶ ಪ್ರವಾಸ ನೆಮ್ಮದಿ ನೀಡುತ್ತದೆ” ಎಂದು ಹೇಳಿದರು.
ಭಾರತ-ಪಾಕಿಸ್ತಾನ ಪಂದ್ಯ
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಕುರಿತು ಕೇಳಿದಾಗ, “ಪಂದ್ಯ ಚೆನ್ನಾಗಿತ್ತು. ಭಾರತ ಗೆದ್ದಿದೆ. ಇನ್ನೂ ಅನೇಕ ಪಂದ್ಯಗಳನ್ನು ಗೆಲ್ಲಬೇಕಿದೆ” ಎಂದು ಪ್ರತಿಕ್ರಿಯಿಸಿದರು.
ಆರ್ಎಸ್ಎಸ್ ನೋಂದಣಿ ಚರ್ಚೆ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನೋಂದಣಿ ವಿಚಾರದ ಬಗ್ಗೆ ಕೇಳಿದಾಗ, “ಆ ವಿಷಯದ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಹೇಳಿದರು.
ನಂದಿನಿ ಉತ್ಪನ್ನಗಳ ಬಗ್ಗೆ ಅಪಪ್ರಚಾರ
ನಂದಿನಿ ಉತ್ಪನ್ನಗಳನ್ನು ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಸುದ್ದಿಗಳ ಕುರಿತು ಮಾತನಾಡಿದ ಅವರು, “ನಂದಿನಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಉತ್ಪನ್ನ ತಯಾರಿಕೆಯಲ್ಲಿ ಯಾವುದೇ ರೀತಿಯ ಕಲಬೆರಕೆ ನಡೆಯುವುದಿಲ್ಲ. ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ” ಎಂದು ತಿಳಿಸಿದರು.
ಖಾಸಗಿ ಕಂಪನಿಗಳಿಂದ ಅಪಪ್ರಚಾರ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ, “ಖಾಸಗಿಯವರು ಅಥವಾ ಇತರರು ಮಾಡಿಸುತ್ತಿರಬಹುದು. ಸ್ಪರ್ಧೆಯ ಸಂದರ್ಭದಲ್ಲಿ ಅಪಪ್ರಚಾರ ಸಹಜ. ನಂದಿನಿ ಎಂದಿಗೂ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ನಷ್ಟವಾದರೂ ಗ್ರಾಹಕರು ಮತ್ತು ರೈತರಿಗೆ ಅನ್ಯಾಯ ಮಾಡಿಲ್ಲ. ಮುಂದೆಯೂ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತೇವೆ” ಎಂದು ಭರವಸೆ ನೀಡಿದರು.

