ಛತ್ತೀಸ್ಗಢ, ಫೆಬ್ರವರಿ 17: ಏಕೈಕ ಮಗನ ಸಾವಿನ ಆಘಾತದಿಂದ ಹೊರಬರಲಾರದೆ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ. ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ಬಳಿಕ ಜೀವನದ ಆಸಕ್ತಿ ಕಳೆದುಕೊಂಡಿದ್ದ ಪೋಷಕರು, “ಅವನೇ ನಮ್ಮ ಪ್ರಪಂಚ… ಈಗ ಅವನೇ ಇಲ್ಲದ ಮೇಲೆ ಬದುಕುವುದಕ್ಕೆ ಅರ್ಥವೇನು?” ಎಂದು ನಾಲ್ಕು ಪುಟಗಳ ಡೆತ್ನೋಟ್ ಬರೆದಿಟ್ಟು ಜೀವತ್ಯಾಗ ಮಾಡಿದ್ದಾರೆ.
ಜಂಜ್ಗೀರ್-ಚಂಪಾ ಜಿಲ್ಲೆಯ ಶಿವರಿನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ನಿರ್ಮಾನಿಶ್ಯಬ್ಧ ವಾತಾವರಣದ ಮಧ್ಯೆ ಮನೆಯ ಅಂಗಳದಲ್ಲಿರುವ ಬೇವಿನ ಮರದಲ್ಲಿ ಕೃಷ್ಣ ಪಟೇಲ್ (48) ಹಾಗೂ ಪತ್ನಿ ರಮಾ ಬಾಯಿ (47) ಅವರ ಶವಗಳು ನೇತಾಡುತ್ತಿದ್ದವು. ಈ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ದಂಪತಿ ತಮ್ಮ ನಿರ್ಧಾರದ ಕುರಿತು ನಾಲ್ಕು ಪುಟಗಳ ಆತ್ಮಹತ್ಯೆ ಪತ್ರ ಬರೆದಿರುವುದರ ಜೊತೆಗೆ ವಿಡಿಯೋ ಸಂದೇಶವನ್ನೂ ದಾಖಲಿಸಿದ್ದಾರೆ. ಅವರ ಮಾತುಗಳು ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿವೆ.
ದಂಪತಿಯ ಏಕೈಕ ಪುತ್ರ ಆದಿತ್ಯ (21) 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಕೃಷ್ಣ ಪಟೇಲ್ ಹಾಗೂ ರಮಾ ಬಾಯಿ ಅವರಿಗೆ ಆದಿತ್ಯನೇ ಪ್ರಪಂಚವಾಗಿದ್ದನು. ಅಪಘಾತದ ಬಳಿಕ ಕುಟುಂಬದ ಮೇಲೆ ಸಿಡಿಲು ಬಡಿದಂತಾಗಿತ್ತು.
ಆ ದಿನ ಆದಿತ್ಯ ದೇವಸ್ಥಾನದ ಕೆಲಸ ಹಾಗೂ ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಟಿದ್ದನೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. “ಅಂದು ಅವನು ಹೋಗುವುದಿಲ್ಲ ಎಂದರೂ ನಾನು ಬಲವಂತವಾಗಿ ಕಳುಹಿಸಿದೆ. ಅದೇ ನನ್ನ ದೊಡ್ಡ ತಪ್ಪು. ಮಗ ಶಾಶ್ವತವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾನೆ. ನಾವು ಮಾತ್ರ ಜೀವಂತವಾಗಿದ್ದೇವೆ,” ಎಂದು ಕೃಷ್ಣ ಪಟೇಲ್ ಬರೆದಿದ್ದಾರೆ.
ಭಾನುವಾರ ತಡರಾತ್ರಿ ತಮ್ಮ ಮನೆಯ ಅಂಗಳದಲ್ಲಿಯೇ ಸೀರೆ ಕಟ್ಟಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಹೊರಠಾಣೆ ಉಸ್ತುವಾರಿ ಸತ್ಯಂ ಚೌಹಾಣ್ ತಿಳಿಸಿದ್ದಾರೆ.
“ಮಗನನ್ನು ಕಳೆದುಕೊಂಡ ದಿನದಿಂದ ಅವರ ಮುಖದಲ್ಲಿ ನಗುವೇ ಕಾಣಿಸಿರಲಿಲ್ಲ. ದೀರ್ಘಕಾಲದ ನೋವಿನ ಬಳಿಕ ನನ್ನ ಮನಸ್ಸು ಈಗ ಶಾಂತವಾಗಿದೆ. ನಾನು ಕೂಡಾ ಅವನೊಂದಿಗೆ ಹೋಗುತ್ತಿದ್ದೇನೆ,” ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದಲ್ಲದೆ, ಆದಿತ್ಯನ ಅಪಘಾತದ ಬಳಿಕ ಬಂದ ಪರಿಹಾರದ ಹಣವನ್ನು ತಮ್ಮ ಹಿರಿಯ ಸಹೋದರರಾದ ಕುಲಭರ ಪಟೇಲ್ ಹಾಗೂ ಜಲಭರ ಪಟೇಲ್ ಅವರಿಗೆ ವರ್ಗಾಯಿಸಬೇಕೆಂದು ಅವರು ವಿನಂತಿಸಿದ್ದಾರೆ. “ನಾವು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ನಮ್ಮನ್ನು ಶಿವನಿಗೆ ಅರ್ಪಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾರೂ ಹೊಣೆಯಲ್ಲ. ಸಂತೋಷದಿಂದ ನಮ್ಮನ್ನು ಕಳುಹಿಸಿಕೊಡಿ,” ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

