ನವದೆಹಲಿ: ಇಂದು ದೇಶಾದ್ಯಂತ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, 11ನೇ ಬಾರಿಗೆ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು.
ಇದಕ್ಕೂ ಮೊದಲು ಪ್ರಧಾನಿ ಮೋದಿ ಅವರು ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ರಾಜ್ಘಾಟ್ನಿಂದ ಕೆಂಪುಕೋಟೆಗೆ ತಲುಪಿದರು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿಯನ್ನು ಸ್ವಾಗತಿಸಿದರು.
2024ರ ಲೋಕಸಭೆ ಚುನಾವಣೆಯಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ನಂತರ ಇದು ಅವರ ಮೊದಲ ಸ್ವಾತಂತ್ರ್ಯತ್ಸವ ದಿನದ ಭಾಷಣವಾಗಿದೆ. ಕೆಂಪು ಕೋಟೆಯ ಮೇಲೆ ಸತತ 11ನೇ ಬಾರಿಗೆ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ
ಈ ಹಿಂದೆ ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದ ಮನಮೋಹನ್ ಸಿಂಗ್ ಅವರು ಸತತ 10 ಬಾರಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಈಗ 3ನೇ ಅವಧಿಗೆ ಮೊದಲ ಬಾರಿಗೆ ಧ್ವಜಾರೋಹಣ ಮಾಡುವ ಮೂಲಕ ಪ್ರಧಾನಿ ಅದನ್ನು ಹಿಂದಿಕ್ಕುವರು. ಈ ಹಿಂದೆ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು 17 ಬಾರಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 16 ಬಾರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
*ಗಮನ ಸೆಳೆದ ರಾಜಸ್ಥಾನಿ ಪೇಟ :
ಈ ವೇಳೆ ಗಮನ ಸೆಳೆದಿದ್ದು ಅವರ ಪೇಟ. ಪ್ರತಿ ವರ್ಷವೂ ವೇಷಭೂಷಣಗಳಿಂದಲೇ ಗಮನ ಸೆಳೆಯುವ ನಮೋ, ಗುರುವಾರ ಕೆಂಪು ಕೋಟೆಯಲ್ಲಿ ರಾಜಸ್ಥಾನಿ ಲೆಹರಿಯಾ ಪ್ರಿಂಟ್ ಪೇಟಾ ಧರಿಸಿ ಗಮನ ಸೆಳೆದರು. ಶಿರಸ್ತ್ರಾಣವು ಉದ್ದವಾದ ಬಾಲದೊಂದಿಗೆ ಕಿತ್ತಳೆ, ಹಳದಿ ಮತ್ತು ಹಸಿರು ಬಣ್ಣಗಳ ಮಿಶ್ರಣದಿಂದ ಕೂಡಿದ ಪೇಟ ಧರಿಸಿದ್ದರು. ಇದರೊಂದಿಗೆ ಬಿಳಿ ಕುರ್ತಾ, ತಿಳಿ ನೀಲಿ ಬಣ್ಣದ ಬಂಧಗಾಲಾ ಜಾಕೆಟ್ ಹೆಚ್ಚು ಗಮನ ಸೆಳೆಯಿತು.
‘ಜಾತ್ಯತೀತ ನಾಗರಿಕ ಸಂಹಿತೆ’ಗೆ ಸಮಯ ಬಂದಿದೆ :
ಅಸ್ತಿತ್ವದಲ್ಲಿರುವ ಕಾನೂನುಗಳು ಕೋಮು ನಾಗರಿಕ ಸಂಹಿತೆ ಮತ್ತು ತಾರತಮ್ಯವಾಗಿರುವುದರಿಂದ ದೇಶದಲ್ಲಿ ಅಸಮಾನತೆಯನ್ನು ತೊಡೆದುಹಾಕಲು ಜಾತ್ಯತೀತ ನಾಗರಿಕ ಸಂಹಿತೆ ಸಮಯದ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ನಾಗರಿಕ ಸಂಹಿತೆಯು ಒಂದು ರೀತಿಯಲ್ಲಿ ಕೋಮು ನಾಗರಿಕ ಸಂಹಿತೆಯಾಗಿದೆ.ಏಕೆಂದರೆ ಅದು ಜನರ ನಡುವೆ ತಾರತಮ್ಯವನ್ನುಂಟುಮಾಡುತ್ತದೆ.ದೇಶವನ್ನು ಕೋಮುವಾದದಲ್ಲಿ ವಿಭಜಿಸುವ ಮತ್ತು ಅಸಮಾನತೆಗೆ ಕಾರಣವಾಗುವ ಕಾನೂನುಗಳಿಗೆ ಆಧುನಿಕ ಸಮಾಜದಲ್ಲಿ ಸ್ಥಾನವಿಲ್ಲ ಎಂದು ಹೇಳಿದರು.
ನಾನು ಹೇಳುತ್ತೇನೆ, ಭಾರತವು ಜಾತ್ಯತೀತ ನಾಗರಿಕ ಸಂಹಿತೆಯನ್ನು ಹೊಂದುವುದು ಇಂದಿನ ಅಗತ್ಯವಾಗಿದೆ. ನಾವು 75 ವರ್ಷಗಳು ಕೋಮು ನಾಗರಿಕ ಸಂಹಿತೆಯೊಂದಿಗೆ ಬದುಕಿದ್ದೇವೆ. ಈಗ ನಾವು ಜಾತ್ಯತೀತ ನಾಗರಿಕ ಸಂಹಿತೆಯತ್ತ ಸಾಗಬೇಕಾಗಿದೆ. ಆಗ ಮಾತ್ರ ಧರ್ಮಾಧಾರಿತವಾಗಿದೆ. ತಾರತಮ್ಯ ಕೊನೆಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ದೇಶದ ಬಹುಪಾಲು ವರ್ಗವು ಇದರ ಬಗ್ಗೆ ಅತೀವ ನಂಬಿಕೆ ಹೊಂದಿದೆ. ಇಲ್ಲಿವರೆಗೆ ಇದ್ದ ಕೋಮು ನಾಗರಿಕ ಸಂಹಿತೆಯಿಂದ ಮುಕ್ತವಾಗಿ ದೇಶದಲ್ಲಿ ಸೆಕ್ಯುಲರ್ ಸಿವಿಲ್ ಕೋಡ್ ಜಾರಿಯಾಗುವುದು ಅಗತ್ಯವಿದೆ. ಆಗ ಮಾತ್ರ ನಾವು ಧರ್ಮದ ಆಧಾರದ ತಾರತಮ್ಯದಿಂದ ಮುಕ್ತರಾಗುತ್ತೇವೆ ಎಂದರು.
ಕ್ರೀಟಾಪಟುಗಳಿಗೆ ಅಭಿನಂದನೆ :
ಇನ್ನು ಇದೇ ವೇಳೆ ಒಲಿಂಪಿಕ್ಸ್ ಕ್ರೀಟಾಪಟುಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಒಲಿಂಪಿಕ್ಸ್ ನಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರುವಂತೆ ಮಾಡಿದ ಯುವಕರೂ ನಮೊಂದಿಗಿದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ ನಾನು ನಮ ಎಲ್ಲಾ ಕ್ರೆಡಾಪಟುಗಳು ಮತ್ತು ಆಟಗಾರರನ್ನು ಅಭಿನಂದಿಸುತ್ತೇನೆ ಎಂದರು.
ಕೋಲ್ಕತಾ ವೈದ್ಯೆ ಕೊಲೆ ಪ್ರಸ್ತಾಪ :
ಪ್ರಧಾನಿ ಮೋದಿ ತಮ ಭಾಷಣದ ವೇಳೆ ಕೋಲ್ಕತ್ತಾದಲ್ಲಿ ನಡೆದಿರುವ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮಾತೆ ಸಹೋದರಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪಾಪಿಗಳನ್ನು ಗಲ್ಲಿಗೇರಿಸಬೇಕು. ಆಗ ಮಾತ್ರ ಜನರಲ್ಲಿ ಅಪರಾಧಗಳ ಬಗ್ಗೆ ಭಯ ಮೂಡಲು ಸಾಧ್ಯ. ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಬಹಳ ಉಗ್ರವಾಗಿ ಧ್ವನಿ ಎತ್ತಬೇಕಿದೆ. ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ತನಿಖೆ ನಡೆಸಿ ತಪ್ಪಿತಸ್ಥರನ್ನು ವಿಳಂಬ ಮಾಡದೆ ಶಿಕ್ಷಿಸಬೇಕು ಎಂದರು.
*98 ನಿಮಿಷ ಭಾಷಣ :
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಐತಿಹಾಸಿಕ ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡುವಾಗ 98 ನಿಮಿಷಗಳಲ್ಲಿ ತಮ್ಮ ಸುದೀರ್ಘ ಸ್ವಾತಂತ್ರ್ಯ ದಿನದ ಭಾಷಣ ಮಾಡಿದರು. ಮೋದಿಯವರ ಸ್ವಾತಂತ್ರ್ಯ ದಿನದ ಭಾಷಣಗಳು ಸರಾಸರಿ 82 ನಿಮಿಷಗಳು – ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿಗಿಂತ ಹೆಚ್ಚು. ಮೊದಲು ಅವರ ದೀರ್ಘಾವಧಿಯ ಭಾಷಣವು 2016 ರಲ್ಲಿ 96 ನಿಮಿಷಗಳಿಗೆ ಸೀಮಿತವಾಗಿತ್ತು. ಅವರ ಚಿಕ್ಕ ಭಾಷಣವು 2017 ರಲ್ಲಿ ಅವರು ಸುಮಾರು 56 ನಿಮಿಷಗಳ ಕಾಲ ಮಾತನಾಡಿದ್ದರು.
*ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಸಿದ್ಧ :
ಜಾಗತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, 2036ರಲ್ಲಿ ಒಲಿಂಪಿಕ್ಸ್ ಆತಿಥ್ಯ ವಹಿಸುವ ಪ್ರಯತ್ನದಲ್ಲಿ ದೇಶವು ಯಾವುದೇ ಪ್ರಯತ್ನವನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ. 2036ರ ಒಲಿಂಪಿಕ್ಸ್ ಗೆ ಆತಿಥ್ಯ ವಹಿಸುವುದು ಭಾರತದ ಕನಸಾಗಿದೆ, ಅದಕ್ಕಾಗಿ ನಾವು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ ಎಂದು 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಮೇಲೆ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿ ಹೇಳಿದರು.
*ಬಾಂಗ್ಲಾ ಹಿಂದೂಗಳಿಗೆ ಭಾರತೀಯರು ಭದ್ರತೆ ನೀಡಲು ಬಯಸ್ತಾರೆ :
ಭಾರತ ಯಾವಾಗಲೂ ಬಾಂಗ್ಲಾದ ಹಿತಚಿಂತಕ ದೇಶವಾಗಿದೆ. ಆದರೆ ಇತ್ತೀಚಿನ ದಾಳಿಗಳು ಅಲ್ಪಸಂಖ್ಯಾತರ ಮೇಲೆ ತಿರುಗಿರುವುದು ದುರಾದೃಷ್ಟಕರ, ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿ ಜೊತೆಗೆ ಹಿಂದೂ ಸಮುದಾಯದ ಮೇಲೆ ನಡೆದ ದಾಳಿಗಳ ಬಗ್ಗೆ ಪ್ರಧಾನಿ ಮೋದಿ ಆತಂಕ ವ್ಯಕ್ತಪಡಿಸಿದರು. ಬಾಂಗ್ಲಾ ಹಿಂದೂಗಳ ಪರಿಸ್ಥಿತಿಗೆ ಮೊದಲು ಪ್ರತಿಕ್ರಿಯಿಸಿದ ಅವರು ಬಾಂಗ್ಲಾದೇಶದಲ್ಲಿರುವ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ 140 ಕೋಟಿ ಭಾರತೀಯರು ಚಿಂತಿತರಾಗಿದ್ದಾರೆ ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ. ಬಾಂಗ್ಲಾದಲ್ಲಿ ಶೀಘ್ರದಲ್ಲೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಮೋದಿ ಭರವಸೆ ವ್ಯಕ್ತಪಡಿಸಿದರು. ಅಲ್ಲಿರುವ ಹಿಂದೂಗಳು ಮತ್ತು ಅಲ್ಪಸಂಖ್ಯಾತರಿಗೆ ಭಾರತೀಯರು ಭದ್ರತೆಯನ್ನು ನೀಡಲು ಬಯಸುತ್ತಾರೆ ಎಂದು ಮೋದಿ ಹೇಳಿದರು.
*ವಿಕಸಿತ ಭಾರತ 140 ಕೋಟಿ ಜನರ ಸಂಕಲ್ಪ :
“ವಿಕಸಿತ ಭಾರತ 140 ಕೋಟಿ ಜನರ ಸಂಕಲ್ಪ ಮತ್ತು ಕನಸುಗಳ ಪ್ರತಿಬಿಂಬವಾಗಿದೆ. ‘ನಮ್ಮ ಸಂಕಲ್ಪ’ದೊಂದಿಗೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಜನರು ಸಮರ್ಥರಾಗಿದ್ದಾರೆ” ಎಂದು ತಿಳಿಸಿದರು.
“ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ದೇಶ ಋಣಿಯಾಗಿದೆ. ಸ್ವಾತಂತ್ರ್ಯ ಪಡೆಯಲು ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯಲು 40 ಕೋಟಿ ಜನರು ಮುಂದಾಗಿದ್ದರು ಎಂದರೆ ಇನ್ನೂ 140 ಕೋಟಿ ಜನರ ಸಂಕಲ್ಪದಿಂದ ನಾವು ಏನನ್ನು ಸಾಧಿಸಬಹುದು ಎಂದು ಊಹಿಸಿ” ಎಂದು ಪ್ರಧಾನಿ ನುಡಿದರು..
*ಹೊಸ ಕ್ರಿಮಿನಲ್ ಕಾನೂನುಗಳಿಂದ ಎಲ್ಲರಿಗೂ ನ್ಯಾಯ :
ಈ ವರ್ಷದ ಜುಲೈನಲ್ಲಿ ಜಾರಿಗೆ ತಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಎಲ್ಲರಿಗೂ ನ್ಯಾಯ ಖಾತ್ರಿಪಡಿಸುವ ಗುರಿಯನ್ನು ಹೊಂದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎಲ್ಲರಿಗೂ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನಾವು ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ತಂದಿದ್ದೇವೆ. ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ನಾವು ಶಿಕ್ಷೆಗಿಂತ ನ್ಯಾಯಕ್ಕೆ ಆದ್ಯತೆ ನೀಡಿದ್ದೇವೆ ಎಂದರು.
ಈ ವರ್ಷದ ಜುಲೈನಲ್ಲಿ, ಮೂರು ಹೊಸ ಕ್ರಿಮಿನಲ್ ಕಾನೂನುಗಳು — ಭಾರತೀಯ ನ್ಯಾಯ ಸಂಹಿತಾ (BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ (BSA)ಜಾರಿಗೆ ತರಲಾಗಿದೆ. ಕೆಲಸ ಮಾಡುವ ಮಹಿಳೆಯರಿಗೆ, ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ.
ನಾವು ಮಹಿಳೆಯರನ್ನು ಗೌರವಿಸುವುದು ಮಾತ್ರವಲ್ಲ ಹೆಣ್ಣುಮಕ್ಕಳ ವಿಚಾರದಲ್ಲಿ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ತನ್ನ ಮಗುವನ್ನು ಗುಣಮಟ್ಟದ ನಾಗರಿಕನನ್ನಾಗಿ ಮಾಡಲು ತಾಯಿಯ ಅವಶ್ಯಕತೆಗಳಿಗೆ ಅಡ್ಡಿಯಾಗುವುದಿಲ್ಲ ಎಂದರು.
*ವೈದ್ಯಕೀಯ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಭರವಸೆ :
ವೈದ್ಯಕೀಯ ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ವೈದ್ಯರಾಗುವ ಕನಸು ಹೊತ್ತು ವೃತ್ತಿಪರ ಕೋರ್ಸ್ಗಳಿಗಾಗಿ ಭಾರತ ಬಿಟ್ಟು ವಿದೇಶಕ್ಕೆ ಹಾರುವ ಅಭ್ಯರ್ಥಿಗಳು ಹೆಚ್ಚಾಗಿದ್ದಾರೆ. ಈ ವಿಷಯವನ್ನು ಉಲ್ಲೇಖಿಸಿದ ಪ್ರಧಾನಿ, “ಮೆಡಿಕಲ್ ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ 75,000 ಹೊಸ ಸೀಟುಗಳನ್ನು ಹೆಚ್ಚಿಸಲಾಗುವುದು” ಎಂದು ಭರವಸೆ ನೀಡಿದರು.
“ಕಳೆದ ದಶಕದಲ್ಲಿ ತಮ್ಮ ಸರ್ಕಾರವು ಲಭ್ಯವಿರುವ ಒಟ್ಟು ಸೀಟುಗಳನ್ನು ಸುಮಾರು ಒಂದು ಲಕ್ಷಕ್ಕೆ ಹೆಚ್ಚಿಸಿದೆ. ಈಗ 75,000 ಹೆಚ್ಚು ಸೀಟುಗಳನ್ನು ಸೇರಿಸುವುದರಿಂದ ಪರೀಕ್ಷೆಗೆ ತಯಾರಿ ನಡೆಸಲು ಸಾಕಷ್ಟು ಹಣವನ್ನು ವ್ಯಯಿಸುವ ಲಕ್ಷಾಂತರ ಅಭ್ಯರ್ಥಿಗಳ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಇತರೆ ದೇಶಗಳಿಗೆ ಹೋಗುವುದು ಕೂಡ ತಪ್ಪುತ್ತದೆ” ಎಂದು ಭರವಸೆ ವ್ಯಕ್ತಪಡಿಸಿದರು

