ಬೆಂಗಳೂರು: ನಗರ ಪೊಲೀಸ್ ಆಯುಕ್ತರಾಗಿ ಹಲವು ಕಠಿಣ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಗೃಹರಕ್ಷಕ ಮತ್ತು ಅಗ್ನಿಶಾಮಕದಳದ ಪೊಲೀಸ್ ಮಹಾನಿರ್ದೇಶಕ (DGP) ಕಮಲ್ ಪಂತ್ (Kamal Panth) ಅವರು ಇನ್ನೆರಡು ದಿನ(ಜೂ.30)ಗಳಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.
ಕರ್ನಾಟಕ ಕೇಡರ್ ನ 1992ರ ಬ್ಯಾಚ್ ನಐಪಿಎಸ್ ಅಧಿಕಾರಿಯಾಗಿದ್ದ ಉತ್ತರಾಖಂಡ ಮೂಲದ ಕಮಲ್ ಪಂತ್ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ 34 ವರ್ಷಗಳ ಕಾಲ ನಿಷ್ಕಳಂಕ,ನಿಷ್ಠಾವಂತ, ದಕ್ಷಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಾಜ್ಯದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಶಿವಮೊಗ್ಗದಲ್ಲಿ ಸೇವೆ ಆರಂಭಿಸಿದ್ದ ಕಮಲ್ ಪಂತ್ ಅವರು ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳ ಎಸ್ಪಿಯಾಗಿ ಕೇಂದ್ರವಲಯದ ಐಜಿಪಿ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಅಲ್ಲಿಂದ ಎಡಿಜಿಪಿ ಹುದ್ದೆಗೆ ಬಡ್ತಿ ಪಡೆದರು. ಆಡಳಿತ, ಕಾನೂನು ಸುವ್ಯವಸ್ಥೆ,ಗುಪ್ತಚರದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಎಡಿಜಿಪಿ) ರಾಗಿ ಬಳಿಕ ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ನೇಮಕಗೊಂಡಿದ್ದರು.
ಡಿಜಿಪಿ ಹುದ್ದೆಗೆ ಬಡ್ತಿಹೊಂದಿದರೂ ಎರಡು ಬಾರಿ ನಗರ ಪೊಲೀಸ್ ಕಮೀಷನರ್ ಹುದ್ದೆಗೆ ವಿಸ್ತರಣೆ ಹೊಂದಿದ ಕಮಲ್ ಪಂತ್ ಅವರು ಪೂರ್ವ ವಿಭಾಗದಲ್ಲಿ ನಡೆದ ಭಾರೀ ಗಲಭೆ, ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿಪೊಲೀಸ್ ಠಾಣೆಗಳ ಮೇಲೆ ದಾಳಿ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯನ್ನು ಧ್ವಂಸಗೊಳಿಸಿ ಶಾಸಕರ ಮನೆಗೆ ಬೆಂಕಿ ಹಚ್ಚಲಾಗಿದ್ದನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಅತ್ಯುತ್ತಮ ಕಮಿಷನರ್: ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ಸಿಲುಕಿದ್ದ ಡ್ರಗ್ಸ್ ಪ್ರಕರಣ, ಬಿಟ್ ಕಾಯಿನ್ ಹಗರಣ ಸೇರಿ ಹಲವು ಸವಾಲಾಗಿದ್ದ ಪ್ರಕರಣಗಳನ್ನು ವಿವಾದಗಳಿಗೆ ಎಡೆಮಾಡದೇ ನಿಭಾಯಿಸಿ ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಕಾರಣರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಹಲವು ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಿ ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಂಡುಕೆಳಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅತ್ಯುತ್ತಮ ಕಮೀಷನರ್ ಎನ್ನುವ ಖ್ಯಾತಿಗೆ ಪಾತ್ರವಾದರು.
2015ರಲ್ಲಿ ಕಾರಾಗೃಹಎಡಿಜಿಪಿಯಾಗಿ, ಲೋಕಾಯುಕ್ತ ಕಚೇರಿಯಲ್ಲಿ ನಡೆದಿದ್ದ ಬಹುಕೋಟಿ ಭ್ರಷ್ಟಾಚಾರ ಹಗರಣದ ತನಿಖೆಗೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಅವರು, ಅಂದಿನ ಲೋಕಾಯುಕ್ತರ ಪುತ್ರಹಾಗೂ ಇತರ ಆರೋಪಿಗಳ ಪಟ್ಟಿ ಸಲ್ಲಿಸಿದ್ದರು.

ರಾಜ್ಯದಲ್ಲಿ ಪೊಲೀಸ್ ಸೇವೆಯಿಂದ ನನ್ನ ವೃತ್ತಿಜೀವನದುದ್ದಕ್ಕೂದೊರೆತ ಮನ್ನಣೆ ಮತ್ತು ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ ಸಂತೃಪ್ತನಾಗಿ ನಿವೃತ್ತನಾಗುತ್ತಿದ್ದೇನೆ ಕಮಲ್ ಪಂತ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

