ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಭೈರತಿ ಬಸವರಾಜ್ ಬಂಧನದ ಕುರಿತು ಸದಾಶಿವನಗರ ನಿವಾಸದ ಬಳಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿಐಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಈ ಹಿನ್ನೆಲೆ ಭೈರತಿ ಬಸವರಾಜ್ ಕೋರ್ಟ್ನಲ್ಲಿ ಬೇಲ್ಗೆ ಅರ್ಜಿ ಸಲ್ಲಿಸಿದ್ದರು. ನಂತರ ಅವರು ಸುಪ್ರೀಂ ಕೋರ್ಟ್ಗೂ ಬೇಲ್ ಅರ್ಜಿ ಹಾಕಿದರೂ ಅಲ್ಲಿ ಕೂಡ ಅರ್ಜಿ ತಿರಸ್ಕೃತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಅವರ ಮುಂದೆ ಕೇವಲ ಎರಡು ಆಯ್ಕೆಗಳು ಮಾತ್ರ ಇದ್ದವು – ಒಂದು ಸರಂಡರ್ ಆಗುವುದು, ಇಲ್ಲವೇ ಬಂಧನಕ್ಕೆ ಒಳಪಡುವುದು. ಈ ಕಾರಣದಿಂದ ಅವರು ಸರಂಡರ್ ಆಗಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆ ತನ್ನ ಹಾದಿಯಲ್ಲಿ ಸಾಗಲಿದೆ. ಇದನ್ನು ಬಿಟ್ಟರೆ ಸದ್ಯ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ಚರ್ಚೆ – ‘Enough is Enough’
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಬಾರದೆಂದು ಹೈಕಮಾಂಡ್ ಸೂಚಿಸಿದ್ದರೂ ಕೆಲ ಶಾಸಕರು ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಪರಮೇಶ್ವರ್ ಕಠಿಣವಾಗಿ ಪ್ರತಿಕ್ರಿಯಿಸಿದರು.
ನಮ್ಮ ಎಐಸಿಸಿ ಅಧ್ಯಕ್ಷರು ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕಿಂತ ಕಠಿಣವಾಗಿ ಹೇಳಲು ಸಾಧ್ಯವಿಲ್ಲ. ಆದರೂ ಕೆಲ ಶಾಸಕರು ಮತ್ತು ಮುಖಂಡರು ಪದೇ ಪದೇ ಮಾತನಾಡುತ್ತಿರುವುದು ಸರಿಯಲ್ಲ. ಇದು ಕೂಡಲೇ ನಿಲ್ಲಬೇಕು ಎಂದು ಹೇಳಿದರು.
ಜನರು ನಮ್ಮಿಂದ ನಿರೀಕ್ಷಿಸುವುದು ಅಭಿವೃದ್ಧಿ ಮತ್ತು ಆಡಳಿತ. ಸಾರ್ವಜನಿಕವಾಗಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಸರಿಯಲ್ಲ. ಹೈಕಮಾಂಡ್ ಇದನ್ನು ಗಮನಿಸುತ್ತಿದೆ ಎಂದು ಭಾವಿಸುತ್ತೇನೆ. ಸಮಯ ಬಂದಾಗ ನಾನು ಕೂಡ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ ಎಂದರು.
“Enough is Enough. ಇದು ಕೂಡಲೇ ನಿಲ್ಲಲೇಬೇಕು. ನಾವು ಅಭಿವೃದ್ಧಿಯ ಕಡೆ ಗಮನ ಕೊಡಬೇಕು. ಹೈಕಮಾಂಡ್ಗೆ ಯಾವಾಗ ಏನು ಮಾಡಬೇಕು ಗೊತ್ತಿದೆ. ಇಂತಹ ಸಂದರ್ಭಗಳು ಅವರಿಗೆ ಹೊಸದಲ್ಲ. ಕರ್ನಾಟಕದಲ್ಲಿ ಈ ಹಿಂದೆ ಕೂಡ ಕ್ರಮ ತೆಗೆದುಕೊಂಡಿದ್ದಾರೆ. ಎಲ್ಲರೂ ಸಹನೆಯಿಂದ ವರ್ತಿಸುವುದನ್ನು ಕಲಿಯಬೇಕು,” ಎಂದು ಅವರು ಹೇಳಿದರು.
ಚಿನ್ನಸ್ವಾಮಿ ಕ್ರೀಡಾಂಗಣ – ಐಪಿಎಲ್ ಪಂದ್ಯಗಳಿಗೆ ಷರತ್ತುಬದ್ಧ ಅನುಮತಿ
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಕುರಿತು ಸಚಿವರು ಪ್ರತಿಕ್ರಿಯೆ ನೀಡಿದರು.
In-principle ಅನುಮತಿ ನೀಡಲಾಗಿದೆ. ಜಸ್ಟೀಸ್ ಕುನ್ಹಾ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಸೂಚಿಸಲಾಗಿದೆ. ಮ್ಯಾಚ್ಗೆ ಮೊದಲು ಕೈಗೊಳ್ಳಬೇಕಾದ ಕ್ರಮಗಳು, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಸೇರಿದಂತೆ ಮೂರು ಪ್ರಮುಖ ಭಾಗಗಳಲ್ಲಿ ಸೂಚನೆ ನೀಡಲಾಗಿದೆ.
ಇದಕ್ಕಾಗಿ ಜಿಬಿಎ ಆಯುಕ್ತರು, ನಗರ ಪೊಲೀಸ್ ಆಯುಕ್ತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಐಪಿಎಲ್ ಪಂದ್ಯಾವಳಿ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲಾಗುತ್ತದೆ.
ಈ ಬಾರಿ ಭದ್ರತಾ ಕ್ರಮಗಳನ್ನು ನಾಲ್ಕು ಪಟ್ಟು ಹೆಚ್ಚಿಸಲಾಗುತ್ತದೆ. ಕಳೆದ 50 ವರ್ಷಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ರೀತಿಯ ಘಟನೆ ನಡೆದಿರಲಿಲ್ಲ. ಜನರ ಭದ್ರತೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

