ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿರುವ ಕುರಿತು ನಾಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ D. K. Shivakumar ತಿಳಿಸಿದ್ದಾರೆ. ಇಂದು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಇಷ್ಟವಿಲ್ಲ ಎಂದು ಹೇಳಿದ ಅವರು, ಶಾಸಕರು, ಬೆಂಗಳೂರಿನಲ್ಲಿ ಇರುವ ಎಐಸಿಸಿ ಕಾರ್ಯದರ್ಶಿಗಳು ಹಾಗೂ ಸಂಸದ ಅಭ್ಯರ್ಥಿಗಳೊಂದಿಗೆ ಮಾತ್ರ ಸಭೆ ನಡೆಸಿದ್ದೇನೆ ಎಂದರು. ಈ ಬಗ್ಗೆ ಸಂಪೂರ್ಣ ವಿವರಗಳನ್ನು ನಾಳೆ ಮಾಧ್ಯಮಗಳ ಮುಂದೆ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಗ್ಯಾಸ್ ಬೆಲೆ ಏರಿಕೆ ಹಾಗೂ ಪೂರೈಕೆಯ ವ್ಯತ್ಯಯ ಕುರಿತು ಮಾತನಾಡಿದ ಅವರು, ಈ ವಿಚಾರವನ್ನು ಸಂಸತ್ತಿನಲ್ಲಿ ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು. ಆದರೆ ಸರ್ಕಾರ ಇದುವರೆಗೆ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು. ಇಂಡಿಯಾ ಒಕ್ಕೂಟದ ಸಂಸದರು ಈ ವಿಷಯವಾಗಿ ಪ್ರತಿಭಟನೆ ನಡೆಸಿದ್ದಾರೆ ಎಂದ ಅವರು, ದೇಶದಲ್ಲಿ ಗ್ಯಾಸ್ ಕೊರತೆ ಉಂಟಾಗಿದ್ದು ಜನರಿಗೆ ತೊಂದರೆ ಆಗುತ್ತಿದೆ, ಈ ಬಗ್ಗೆ ಸಂಸದರು ಮಾತನಾಡಬೇಕು ಎಂದು ಹೇಳಿದರು.
ಇದೇ ವೇಳೆ H. D. Deve Gowda ಅವರು ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆಗಳ ವಿಳಂಬಕ್ಕೆ ಕಾಂಗ್ರೆಸ್ ಕಾರಣ ಎಂದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ದೇವೇಗೌಡರು ಹಿರಿಯ ನಾಯಕರು ಎಂದು ಗೌರವ ವ್ಯಕ್ತಪಡಿಸಿದರು. ಈ ವಿಚಾರವನ್ನು ಅವರ ಪಕ್ಷವೇ ಸ್ಪಷ್ಟಪಡಿಸಲಿ, ಅಗತ್ಯವಿದ್ದರೆ ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಚರ್ಚಿಸಲಿ ಎಂದು ಹೇಳಿದರು. ಈ ವಯಸ್ಸಿನಲ್ಲಿ ಅವರನ್ನು ಟೀಕಿಸುವುದು ಸರಿಯಲ್ಲ, ಅವರ ಮನಸ್ಸಿಗೆ ನೋವು ಕೊಡಲು ಇಷ್ಟವಿಲ್ಲ ಎಂದು ಡಿಕೆಶಿವಕುಮಾರ್ ಹೇಳಿದರು.

