ಬೆಂಗಳೂರು: ಮುಂದಿನ ಟಿ20 ವಿಶ್ವಕಪ್ನಿಂದ ಪಾಕಿಸ್ತಾನ್ ಕ್ರಿಕೆಟ್ ತಂಡ ಹೊರಗುಳಿಯುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ. ಈ ಬೆಳವಣಿಗೆಯ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪಾಕಿಸ್ತಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.
ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಡುವ ವಿಚಾರದ ನಂತರ, ಪಾಕಿಸ್ತಾನ್ ತಂಡದ ಭವಿಷ್ಯ ಕೂಡ ಅನುಮಾನದಲ್ಲಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡ ಭಾಗವಹಿಸುವುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಈ ನಿರ್ಧಾರ ಸಂಪೂರ್ಣವಾಗಿ ಪಾಕಿಸ್ತಾನ್ ಸರ್ಕಾರದ ಕೈಯಲ್ಲಿದೆ. ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದರ ಮೇಲೆ ಪಾಕ್ ತಂಡದ ವಿಶ್ವಕಪ್ ಭವಿಷ್ಯ ನಿಂತಿದೆ ಎಂದು ಅವರು ತಿಳಿಸಿದ್ದಾರೆ.
ಈ ಹೇಳಿಕೆಯ ಮೂಲಕ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ಪರೋಕ್ಷ ಬೆಂಬಲ ಸೂಚಿಸಿರುವ ಪಿಸಿಬಿ, ಟಿ20 ವಿಶ್ವಕಪ್ನಿಂದ ಹೊರಗುಳಿಯುವ ಬೆದರಿಕೆಯನ್ನು ಕೂಡ ಒಡ್ಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇತ್ತ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್ನಿಂದ ಹೊರಗುಳಿದರೆ, ಟೂರ್ನಿಗೆ ಭಾರೀ ಆರ್ಥಿಕ ನಷ್ಟ ಸಂಭವಿಸಲಿದೆ ಎಂಬ ಲೆಕ್ಕಾಚಾರವನ್ನು ಪಿಸಿಬಿ ಮಾಡಿದೆ. ಅದರಲ್ಲೂ ಭಾರತ–ಪಾಕಿಸ್ತಾನ್ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯದಿದ್ದರೆ, ವಿಶ್ವಕಪ್ ಟೂರ್ನಿಯೇ ಬಹುತೇಕ ವಿಫಲವಾದಂತೆ ಆಗಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಹಾಗೂ ಐಸಿಸಿಗೆ ಬಿಗ್ ಶಾಕ್ ನೀಡಲು ಪಿಸಿಬಿ ತೆರೆಮರೆಯ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.
ಈ ಬೆಳವಣಿಗೆಯ ಬೆನ್ನಲ್ಲೇ ಐಸಿಸಿ ಕೂಡ ಪಾಕಿಸ್ತಾನ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದು, ಟಿ20 ವಿಶ್ವಕಪ್ನಿಂದ ಪಾಕ್ ತಂಡ ಹೊರಗುಳಿದರೆ ಕಠಿಣ ಪರಿಣಾಮ ಎದುರಾಗಲಿದೆ ಎಂದು ಸೂಚಿಸಿದೆ. ಪಾಕಿಸ್ತಾನ್ ಟಿ20 ವಿಶ್ವಕಪ್ಗೆ ಕೈಕೊಟ್ಟರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಿಂದಲೇ ಬ್ಯಾನ್ ಮಾಡುವ ಸಾಧ್ಯತೆ ಇದೆ ಎಂದು ಐಸಿಸಿ ಎಚ್ಚರಿಸಿದೆ.
ಅಷ್ಟೇ ಅಲ್ಲದೆ, ಯಾವುದೇ ಅಂತಾರಾಷ್ಟ್ರೀಯ ತಂಡಗಳೊಂದಿಗೆ ದ್ವಿಪಕ್ಷೀಯ ಸರಣಿ ಆಡಲು ಅವಕಾಶ ನೀಡುವುದಿಲ್ಲ. ಜೊತೆಗೆ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಆಡಲು ವಿದೇಶಿ ಆಟಗಾರರಿಗೆ ಎನ್ಒಸಿ ನೀಡುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಲಾಗಿದೆ. ಇದಲ್ಲದೆ ಏಷ್ಯಾಕಪ್ ಟೂರ್ನಿಯಿಂದಲೂ ಪಾಕಿಸ್ತಾನ್ ತಂಡವನ್ನು ಬ್ಯಾನ್ ಮಾಡುವ ಎಚ್ಚರಿಕೆ ನೀಡಲಾಗಿದೆ. ಅಂದರೆ ಟಿ20 ವಿಶ್ವಕಪ್ನಿಂದ ಹೊರಗುಳಿದರೆ ಪಾಕಿಸ್ತಾನ್ ಕ್ರಿಕೆಟ್ಗೆ ಅಂತಾರಾಷ್ಟ್ರೀಯ ಮಾನ್ಯತೆ ರದ್ದಾಗುವ ಭೀತಿ ಎದುರಾಗಿದೆ.
ಟಿ20 ವಿಶ್ವಕಪ್ನಿಂದ ಹೊರಗುಳಿಯುವ ಬೆದರಿಕೆ ಒಡ್ಡಿರುವ ಪಿಸಿಬಿಗೆ ಐಸಿಸಿ ಕೌಂಟರ್ ಅಟ್ಯಾಕ್ ನೀಡಿದ್ದು, ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇದೀಗ ಭಾರೀ ಇಕ್ಕಟ್ಟಿಗೆ ಸಿಲುಕಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಾನ್ಯತೆ ರದ್ದತಿಯ ಸೂಚನೆಯ ಕಾರಣ, ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್ನಿಂದ ಹೊರಗುಳಿಯುವುದು ಅನುಮಾನವೇ ಎಂಬ ಅಭಿಪ್ರಾಯ ಕ್ರಿಕೆಟ್ ವಲಯದಲ್ಲಿ ವ್ಯಕ್ತವಾಗುತ್ತಿದೆ.

