ಚಂಡೀಗಢ: ಪಂಜಾಬ್ನ ತರಣ್ ತಾರನ್ ಜಿಲ್ಲೆಯ ಉಸ್ನಾದಲ್ಲಿರುವ ಮಾಯ್ ಭಾಗೋ ಕಾನೂನು ಕಾಲೇಜಿನಲ್ಲಿ ಸೋಮವಾರ ಬೆಳಿಗ್ಗೆ ಭೀಕರ ಘಟನೆ ನಡೆದಿದೆ. ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನು ತರಗತಿಯೊಳಗೇ ಗುಂಡಿಕ್ಕಿ ಕೊಂದು, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕಾಲೇಜಿನ ಮೊದಲ ಸೆಮಿಸ್ಟರ್ ವಿದ್ಯಾರ್ಥಿಯಾದ ಪ್ರಿನ್ಸ್ ರಾಜ್ (ಮಲ್ಲಿಯನ್ ಗ್ರಾಮದ ನಿವಾಸಿ) ತನ್ನ ಸಹಪಾಠಿ ಸಂದೀಪ್ ಕೌರ್ (ನೌಶೇರಾ ಪನ್ನುವಾನ್ ಮೂಲದವರು) ಮೇಲೆ ಬೆಳಿಗ್ಗೆ ಸುಮಾರು 9.15ರ ವೇಳೆಗೆ ತರಗತಿಯೊಳಗೇ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯ ಬಳಿಕ ಪ್ರಿನ್ಸ್ ರಾಜ್ ತಾನೂ ಗುಂಡು ಹಾರಿಸಿಕೊಂಡಿದ್ದಾನೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ತರಗತಿಯೊಳಗೆ ನಡೆದ ಈ ದುರ್ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಅದರ ದೃಶ್ಯಾವಳಿಗಳು ಹೊರಬಿದ್ದಿವೆ. ದೃಶ್ಯಗಳಲ್ಲಿ ಇಬ್ಬರು ಮತ್ತೊಬ್ಬ ಸಹಪಾಠಿಯೊಂದಿಗೆ ತರಗತಿಯಲ್ಲಿ ಕುಳಿತಿರುವುದು ಹಾಗೂ ಪ್ರಿನ್ಸ್ ರಾಜ್ ತನ್ನ ಬ್ಯಾಗ್ನಿಂದ ಪಿಸ್ತೂಲ್ ತೆಗೆದು ಏಕಾಏಕಿ ಗುಂಡು ಹಾರಿಸಿರುವುದು ಕಂಡುಬಂದಿದೆ. ಗಾಯಗೊಂಡ ಪ್ರಿನ್ಸ್ ರಾಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ರೇಮ ಪ್ರಸ್ತಾಪವನ್ನು ತಿರಸ್ಕರಿಸಿದ್ದೇ ಈ ಕೊಲೆಗೆ ಕಾರಣ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಪ್ರಕರಣದ ಕುರಿತು ಪಂಜಾಬ್ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ. ತರಗತಿಗೆ ಬಂದೂಕು ತರಲು ಅವಕಾಶವಾದ ಹಿನ್ನೆಲೆಯಲ್ಲಿ ಕಾಲೇಜು ಆಡಳಿತದ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಮೃತ ವಿದ್ಯಾರ್ಥಿನಿಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಘಟನೆಯಿಂದ ಕಾಲೇಜು ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಭೀತಿಯುಂಟಾಗಿದೆ.

