ಮುಂಬೈ : ಬಹು ನಿರೀಕ್ಷಿತ ವಿವಾದಿತ ‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಕೊನೆಗೂ ಪ್ರಮಾಣಪತ್ರ ನೀಡಿದ್ದಾರೆ. ಈ ಖುಷಿಯನ್ನು ಚಿತ್ರದ ನಟಿ ಮತ್ತು ನಿರ್ದೇಶಕಿ ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ನಮ್ಮ ಎಮರ್ಜೆನ್ಸಿ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ದೊರೆತಿದೆ ಎಂದು ತಿಳಿಸಲು ಖುಷಿ ಆಗುತ್ತಿದೆ. ಶೀಘ್ರದಲ್ಲೇ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಪ್ರಕಟಿಸುತ್ತೇವೆ. ನಿಮ್ಮ ತಾಳ್ಮೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು’ ಎಂದು ಕಂಗನಾ ಬರೆದುಕೊಂಡಿದ್ದಾರೆ.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದರು. ಈ ಘಟನೆಗಳ ಸುತ್ತಮುತ್ತದ ವಿಷಯಗಳನ್ನು ಅಧ್ಯಯನ ನಡೆಸಿ ಕಂಗನಾ ಅವರು ‘ಎಮರ್ಜೆನ್ಸಿ’ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಇಂದಿರಾ ಗಾಂಧಿಯ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ಆದರೆ, ಸೆನ್ಸಾರ್ ಮಂಡಳಿಯವರು ಸಿನಿಮಾದಲ್ಲಿ ಸಾಕಷ್ಟು ಬದಲಾವಣೆಗಳನ್ನು ಸೂಚಿಸಿದ್ದರು. ಅದನ್ನು ಒಪ್ಪದಿದ್ದರೆ ಸೆನ್ಸಾರ್ ಪ್ರಮಾಣಪತ್ರ ನೀಡಲಾಗದು ಎಂದು ಖಡಕ್ ಆಗಿ ಹೇಳಿದ್ದರು.
‘ಎಮರ್ಜೆನ್ಸಿ’ ಚಿತ್ರಕ್ಕೆ ಸಿಖ್ ಸಮುದಾಯದವರು ತಕರಾರರು ತೆಗೆದಿದ್ದಾರೆ. ಈ ಸಿನಿಮಾದಲ್ಲಿ ಸಿಖ್ ಸಮುದಾಯದವರನ್ನು ಟೀಕಿಸುವ ಕೆಲಸ ಆಗಿದೆ ಎಂದು ಹೇಳಿದ್ದರು. ಈ ವಿಚಾರ ಕೋರ್ಟ್ ಮೆಟ್ಟಿಲನ್ನೂ ಹತ್ತಿತ್ತು.
ಇತ್ತೀಚೆಗೆ ಸೆನ್ಸಾರ್ ಮಂಡಳಿ ಹೇಳಿದ ಸೂಚನೆಗಳನ್ನು ಮನ್ನಿಸಿ, ಅದನ್ನು ಪರಿಗಣಿಸಲಾಗುವುದು ಎಂದು ತಂಡ ಹೇಳಿಕೊಂಡಿತ್ತು. ಅಂತೆಯೇ ಈಗ ಬದಲಾವಣೆಗಳಿಗೆ ತಂಡ ಒಪ್ಪಿದೆ. ಹೀಗಾಗಿ, ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿದೆ. ಈ ಖುಷಿ ಸುದ್ದಿಯನ್ನು ಕಂಗನಾ ಫ್ಯಾನ್ಸ್ ಬಳಿ ಹಂಚಿಕೊಂಡಿದ್ದಾರೆ.