ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿನ ದ್ವಾರಪಾಲಕ ವಿಗ್ರಹಗಳ ಚಿನ್ನದ ಹೊದಿಕೆಯ ತಾಮ್ರದ ತಗಡುಗಳಿಂದ ಚಿನ್ನ ಕಳೆದುಹೋದ ಬಗ್ಗೆ ಕೇರಳ ಹೈಕೋರ್ಟ್ ತನಿಖೆಗೆ ಆದೇಶಿಸಿದೆ.
2019 ರಲ್ಲಿ ಹೊಸ ಚಿನ್ನದ ಲೇಪನಕ್ಕಾಗಿ ತಟ್ಟೆಗಳನ್ನು ತೆಗೆದಾಗ, ಅವುಗಳ ತೂಕ 42.8 ಕೆಜಿ ಇತ್ತು, ಆದರೆ ಚೆನ್ನೈ ಮೂಲದ ಸಂಸ್ಥೆಯು ಕೆಲಸದಲ್ಲಿ ತೊಡಗಿಸಿಕೊಳ್ಳುವ ಮೊದಲು ಪರೀಕ್ಷೆ ಮಾಡಿದಾಗ ಕೇವಲ 38.258 ಕೆಜಿ ಮಾತ್ರ ಇತ್ತು, ಸುಮಾರು 4.54 ಕೆಜಿ ಕೊರತೆ ಇತ್ತು ಎಂದು ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ.ವಿ. ಜಯಕುಮಾರ್ ಅವರ ಪೀಠವು ಗಮನಿಸಿತು.
ಇದೀಗ ತನಿಖೆಗೆ ಆದೇಶ ನೀಡಿದ ಹೈಕೋರ್ಟ್ ಪೀಠ, ಎಲ್ಲಾ ರಿಜಿಸ್ಟರ್ಗಳನ್ನು ವಿಜಿಲೆನ್ಸ್ ಅಧಿಕಾರಿಗೆ ಹಸ್ತಾಂತರಿಸುವಂತೆ ಆದೇಶಿಸಿದೆ. ಟಿಡಿಬಿಗೆ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿತು.
ದ್ವಾರಪಾಲಕ ವಿಗ್ರಹಗಳನ್ನು ಮೂಲತಃ 1999 ರಲ್ಲಿ ಅಧಿಕೃತ ಅನುಮೋದನೆಯ ಆಧಾರದ ಮೇಲೆ ಸ್ಥಾಪಿಸಲಾಯಿತು; 40 ವರ್ಷಗಳ ಖಾತರಿಯೊಂದಿಗೆ ಇದನ್ನು ಮಾಡಲಾಗಿದೆ ಎಂದು ನ್ಯಾಯಾಲಯವು ಗಮನಿಸಿತು. ಆದರೆ, ಕೇವಲ ಆರು ವರ್ಷಗಳಲ್ಲಿ ಲೇಪನದಲ್ಲಿ ದೋಷಗಳು ಕಂಡು ಬಂದಿತ್ತು.
2019 ರಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ದ್ವಾರಪಾಲಕ ವಿಗ್ರಹಗಳನ್ನು ಮುಚ್ಚಿದ್ದ ಚಿನ್ನದ ಲೇಪಿತ ತಾಮ್ರದ ತಗಡುಗಳನ್ನು ದುರಸ್ತಿ ಮತ್ತು ಮರು-ಸುವರ್ಣೀಕರಣಕ್ಕಾಗಿ ವಿಶೇಷ ಆಯುಕ್ತರು ಅಥವಾ ನ್ಯಾಯಾಲಯದಿಂದ ಪೂರ್ವ ಸೂಚನೆ ಅಥವಾ ಅನುಮೋದನೆಯಿಲ್ಲದೆ ತೆಗೆದುಹಾಕಿದಾಗ ವಿವಾದ ಪ್ರಾರಂಭವಾಯಿತು.

