ಲಡಾಖ್ : ಲಡಾಖ್ಗೆ ರಾಜ್ಯ ಸ್ಥಾನಮಾನವನ್ನು ನೀಡಲು ಒತ್ತಾಯಿಸಿ ನಡೆಸಿದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ಇಂದು 4 ಜನರು ಸಾವನ್ನಪ್ಪಿದ್ದಾರೆ ಮತ್ತು 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಸಾಧ್ಯವಾಗದೆ ಲಡಾಖ್ ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಇಂದಿನ ಗಲಭೆಯ ವೇಳೆ ಸ್ಥಳೀಯ ಬಿಜೆಪಿ ಕಚೇರಿಗೆ ಕೂಡ ಬೆಂಕಿ ಹಚ್ಚಲಾಯಿತು. ಪ್ರತಿಭಟನಾಕಾರರು ಬೆಂಕಿ ಹಚ್ಚಿ ವಾಹನವನ್ನು ಸಹ ಸುಟ್ಟುಹಾಕಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿದರು.
ಅಶಾಂತಿಯ ನಂತರ, ಲೇಹ್ ಲಡಾಖ್ನಲ್ಲಿ ಕೇಂದ್ರ ಆಡಳಿತವು ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ , 2023ರ ಸೆಕ್ಷನ್ 163 ರ ಅಡಿಯಲ್ಲಿ ಕರ್ಫ್ಯೂ ವಿಧಿಸಿತು. ಹೀಗಾಗಿ, ಈ ಭಾಗದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಲೇಹ್ನಲ್ಲಿ ಪೂರ್ವ ಲಿಖಿತ ಅನುಮೋದನೆಯಿಲ್ಲದೆ ಯಾವುದೇ ಮೆರವಣಿಗೆ, ರ್ಯಾಲಿ ಅಥವಾ ಮೆರವಣಿಗೆ ನಡೆಸಬಾರದು ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ವಾಂಗ್ಚುಕ್ ಪ್ರತಿಕ್ರಿಯೆ :
“ಲೇಹ್ನಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಗಳು ನಡೆದಿವೆ ಎಂದು ನಿಮಗೆ ತಿಳಿಸಲು ನನಗೆ ದುಃಖವಾಗಿದೆ. ಅನೇಕ ಕಚೇರಿಗಳು ಮತ್ತು ಪೊಲೀಸ್ ವಾಹನಗಳನ್ನು ಧ್ವಂಸಗೊಳಿಸಿ ಸುಡಲಾಯಿತು. ಲೇಹ್ನಲ್ಲಿ ಬಂದ್ ಘೋಷಿಸಲಾಯಿತು, ಆದರೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಇದು ಯುವಕರ ಕೋಪ, ಜನರಲ್-ಝಡ್ ಕ್ರಾಂತಿ” ಎಂದು ವಾಂಗ್ಚುಕ್ ಹೇಳಿದರು.
ಉಪವಾಸ ಸತ್ಯಾಗ್ರಹ ನಿಲ್ಲಿಸಿದ ಸೋನಮ್ ವಾಂಗ್ಚುಕ್
ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸೋನಮ್ ವಾಂಗ್ಚುಕ್ ಹಿಂಸಾಚಾರವನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಈ ಹಿಂಸಾಚಾರದ ನಂತರ ತಮ್ಮ 15 ದಿನಗಳ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸಿದ್ದಾರೆ.

