ಬೆಂಗಳೂರು: ರಾಜ್ಯದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆರ್ ಟಿಒ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ನವರಾತ್ರಿಯ ಸಂದರ್ಭದಲ್ಲಿ ಶಾಕ್ ನೀಡಿದ್ದಾರೆ. ಕೋಲಾರ, ಬಳ್ಳಾರಿ, ವಿಜಯಪುರ, ಬೀದರ್ ಮುಂತಾದ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್ ಟಿಒ ಚೆಕ್ ಪೋಸ್ಟ್ ಗಳ ಮೇಲೆ ಏಕಾಏಕಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಹಲವಾರು ದಾಖಲೆಗಳು ಹಾಗೂ ದೈನಂದಿನ ಕಾರ್ಯವೈಖರಿಯನ್ನು ಪರಿಶೀಲಿಸಿದ್ದಾರೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಕ್ರಾಸ್ ಬಳಿ ಇರುವ ಆರ್ ಟಿಒ ಚೆಕ್ ಪೋಸ್ಟ್ ಹಾಗೂ ಮುಳಬಾಗಿಲು ತಾಲೂಕು ನುಂಗಲಿ ಆರ್ ಟಿಒ ಚೆಕ್ ಪೋಸ್ಟ್ ಮೇಲೆ ಕೋಲಾರ ಲೋಕಾಯುಕ್ತ ಎಸ್ಪಿಯವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿರುವ ಆರ್ ಟಿಒ ಚೆಕ್ ಪೋಸ್ಟ್ ಮೇಲೆ ದಾಳಿ ನಡೆಸಲಾಗಿದೆ. ಆ ಚೆಕ್ ಪೋಸ್ಟ್ ಮೇಲೆ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬೀದರ್ ಹಾಗೂ ಕಲಬುರಗಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಈ ದಾಳಿಯಲ್ಲಿ ಲೋಕಾಯುಕ್ತ ಎಸ್ಪಿಯಾದ ಬಿಕೆ ಉಮೇಶ್, ಕಲಬುರಗಿ ಲೋಕಾಯುಕ್ತ ಡಿವೈಎಸ್ ಪಿ ಗೀತಾ ಬೀದರ್ ಮತ್ತು ಡಿವೈಎಸ್ ಪಿ ಹನುಮಂತರಾಯ ನೇತೃತ್ವದ ತಂಡವು ದಾಳಿ ನಡೆಸಿದೆ. ವಿಜಯಪುರ ಜಿಲ್ಲೆಯ ಚಣಚಣ ತಾಲೂಕಿನ ಧೂಳಖೇಡ್ ಬಳಿಯಿರುವ ಆರ್ ಟಿಒ ಚೆಕ್ ಪೋಸ್ಟ್ ಮೇಲೆ ಬೆಳಗಿನ ಜಾವ ದಾಳಿ ನಡೆಸಲಾಗಿದೆ.
ಅದರ ಜೊತೆಯಲ್ಲಿ ಬಳ್ಳಾರಿ ತಾಲೂಕಿನ ಪರಮದೇವನಹಳ್ಳಿಯ (ಪಿಡಿ ಹಳ್ಳಿ) ಬಳಿಯಿರುವ ಚೆಕ್ ಪೋಸ್ಟ್ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ತಂಡವೊಂದು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದಾಳಿ ನಡೆಸಿದೆ. ಚೆಕ್ ಪೋಸ್ಟ್ ನಲ್ಲಿ ಇದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಹಲವಾರು ದಾಖಲೆಗಳು, ಬಿಲ್ ಬುಕ್ ಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ.
ಈ ಚೆಕ್ ಪೋಸ್ಟ್ ಗಳಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಸೂಕ್ತ ದಾಖಲೆಗಳು ಇಲ್ಲದ ವಾಹನಗಳಿಂದ ಲಂಚ ಪಡೆಯಲಾಗುತ್ತಿದೆ ಎಂಬ ಮಾತುಗಳು ಸಹಕೇಳಿಬಂದಿದ್ದವು.
ಅದೇ ಕಾರಣಕ್ಕಾಗಿ, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಲೋಕಾಯುಕ್ತ, ಆಯಾ ಜಿಲ್ಲಾ ಎಸ್ಪಿಗಳಿಗೆ ದಾಳಿಗೆ ಸೂಚನೆ ನೀಡಿತ್ತು. ಆ ಸೂಚನೆಯ ಪ್ರಕಾರವಾಗಿ, ದಾಳಿಯನ್ನು ಸಂಘಟಿಸಿದ್ದ ಜಿಲ್ಲಾ ಲೋಕಾಯುಕ್ತ ಎಸ್ಪಿಗಳು ತಾವೇ ದಾಳಿಯ ನೇತೃತ್ವ ವಹಿಸಿಕೊಂಡು ಈ ಚೆಕ್ ಪೋಸ್ಟ್ ಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

