ಕೊಲಂಬೋ : ಥೈಲ್ಯಾಂಡ್ ಪ್ರವಾಸ ಮುಗಿಸಿ ನಿನ್ನೆ ಸಂಜೆ ಶ್ರೀಲಂಕಾಕ್ಕೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ರೀಲಂಕಾದ ಸಚಿವರು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಇಂದು ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ತಮ್ಮ ದೇಶದ ಪ್ರದೇಶವನ್ನು ಭಾರತದ ವಿರುದ್ಧ ಬಳಸಲು ಬಿಡುವುದಿಲ್ಲ ಎಂಬ ಶ್ರೀಲಂಕಾದ ನಿಲುವನ್ನು ಪುನರುಚ್ಚರಿಸಿದ್ದಾರೆ. ಇದಕ್ಕೂ ಮೊದಲು, ಭಾರತ ಮತ್ತು ಶ್ರೀಲಂಕಾ ನವದೆಹಲಿ-ಕೊಲಂಬೊ ಸಂಬಂಧಗಳನ್ನು ಬಲಪಡಿಸಲು ಪ್ರಮುಖ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ.
ತಮಿಳು ಮೀನುಗಾರರು, ಅವರ ದೋಣಿಗಳ ಬಿಡುಗಡೆಗೆ ಒತ್ತಾಯ ಭಾರತ ಮತ್ತು ಶ್ರೀಲಂಕಾ ಮೀನುಗಾರರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ ತಮಿಳುನಾಡಿನ ಮೀನುಗಾರರು ಮತ್ತು ಅವರ ದೋಣಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಮೋದಿಗೆ ‘ಮಿತ್ರ ವಿಭೂಷಣ’ ಪ್ರಶಸ್ತಿ
ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಗುರುತಿಸಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರು ಇಂದು ‘ಮಿತ್ರ ವಿಭೂಷಣ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಿದ್ದಾರೆ.
ದ್ವೀಪ ರಾಷ್ಟ್ರದ ಅತ್ಯುನ್ನತ ನಾಗರಿಕ ಗೌರವವಾದ ಈ ಪ್ರಶಸ್ತಿಯನ್ನು ಫೆಬ್ರವರಿ 2008 ರಲ್ಲಿ ಅಂದಿನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಆರಂಭಿಸಿದ್ದರು. ಈ ಹಿಂದೆ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಮತ್ತು ಪ್ಯಾಲೆಸ್ತೀನ್ ಮಾಜಿ ನಾಯಕ ಯಾಸರ್ ಅರಾಫತ್ ಅವರಿಗೆ ನೀಡಿ ಗೌರವಿಸಲಾಗಿತ್ತು.
ಅಧ್ಯಕ್ಷ ದಿಸಾನಾಯಕ ಅವರಿಂದ ಶ್ರೀಲಂಕಾ ಮಿತ್ರ ವಿಭೂಷಣ ಪ್ರಶಸ್ತಿಯನ್ನು ಪಡೆದಿರುವುದು ನನಗೆ ಗೌರವವಾಗಿದೆ. ಇದು 1.4 ಬಿಲಿಯನ್ ಭಾರತೀಯರಿಗೆ ಗೌರವದ ವಿಷಯವಾಗಿದೆ” ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳು ಮೀನುಗಾರರ ತಕ್ಷಣ ಬಿಡುಗಡೆ ಮತ್ತು ಅವರ ದೋಣಿಗಳನ್ನು ಹಿಂದಿರುಗಿಸುವಂತೆ ಕೋರಿರುವುದಾಗಿ ಹೇಳಿದ್ದಾರೆ. ತಮಿಳುನಾಡಿನ ಮೀನುಗಾರರ ಪುನರಾವರ್ತಿತ ಬಂಧನ ಮತ್ತು ಶ್ರೀಲಂಕಾ ಅಧಿಕಾರಿಗಳು ಅವರ ದೋಣಿಗಳನ್ನು ವಶಪಡಿಸಿಕೊಂಡಿರುವುದು ಎರಡೂ ದೇಶಗಳ ನಡುವಿನ ದೀರ್ಘಕಾಲದ ಸಂಘರ್ಷವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಶ್ರೀಲಂಕಾ ಅಧಿಕಾರಿಗಳು 11 ಮೀನುಗಾರರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಮಗೆ ತಿಳಿಸಲಾಗಿದೆ. ಬಹುಶಃ ಮುಂಬರುವ ದಿನಗಳಲ್ಲಿ ಇನ್ನೂ ಕೆಲವರನ್ನು ಬಿಡುಗಡೆ ಮಾಡಬಹುದು ಎಂದಿದ್ದಾರೆ.