ಹಾಸನ: ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಸಂಭವಿಸಿದ ಟ್ರಕ್ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಸಂಸದ ಶ್ರೇಯಸ್ ಪಟೇಲ್ ಅವರು ತಲಾ ಒಂದೊಂದು ಲಕ್ಷ ಪರಿಹಾರ ವಿತರಣೆ ಹಂಚಿಕೆ ಮಾಡುತ್ತಿದ್ದಾರೆ. ಬುಧವಾರ ಕಟ್ಟಾಯ ಹೋಬಳಿ ಶಿವಯ್ಯನಕೊಪ್ಪಲು ಗ್ರಾಮದ ಚಂದನ್ ಎಂಬುವರ ಮನೆಗೆ ತೆರಳಿ 1 ಲಕ್ಷ ಪರಿಹಾರ ನೀಡಿ ನೊಂದಿರುವ ಕುಟುಂಬವನ್ನು ಸಂತೈಸಿದರು.
ಇದೇ ರೀತಿಯಲ್ಲಿ ದುರಂತದಲ್ಲಿ ಮಡಿದ ಎಲ್ಲ 10 ಜನರ ಕುಟುಂಬಗಳಿಗೂ ತಲಾ ಒಂದು ಲಕ್ಷ ರೂ. ನೆರವು ನೀಡುವುದಾಗಿ ತಿಳಿಸಿರುವ ಶ್ರೇಯಸ್ ಪಟೇಲ್, ಗಾಯಾಳು ಕುಟುಂಬಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದರು.
ಈ ವೇಳೆ ಮಾತನಾಡಿದ ಸಂಸದರು ಭೀಕರ ಅಪಘಾತದಲ್ಲಿ ಮೃತಪಟ್ಟವರ ಮನೆಗೆ ತೆರಳಿ ವೈಯಕ್ತಿಕವಾಗಿ 1 ಲಕ್ಷ ರೂ.ಪರಿಹಾರ ನೀಡಿದ್ದೇನೆ. ಹೋದ ಜೀವನಕ್ಕೆ ಎಂದೂ ಬೆಲೆ ಕಟ್ಟಲು ಆಗಲ್ಲ. ಜೊತೆಯಲ್ಲಿದ್ದವರನ್ನು ಕಳೆದುಕೊಂಡು ನೋವಿನಲ್ಲಿರುವವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದರು.
ಕಳೆದ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆ ಮೆರವಣಿಗೆ ಸಾಗುವಾಗ ವೇಗವಾಗಿ ಬಂದ ಯಮಸ್ವರೂಪಿ ಟ್ರಕ್ ಮೆರವಣಿಗೆ ಮೇಲೆಯೇ ಹರಿದು 9 ಮಂದಿ ಮೃತಪಟ್ಟು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮರುದಿನ ಮತ್ತೊಬ್ಬ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದ್ದ. ಗಾಯಾಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರನ್ನು ಮೈಸೂರು ಮತ್ತು ಬೆಂಗಳೂರಿಗೆ ಸ್ಥಳಾಂತರ ಮಾಡಲಾಗಿದೆ.

