ಭೋಪಾಲ್: ಅಕ್ರಮ ವಲಸೆ ವಿರುದ್ಧದ ಕಾರ್ಯಾಚರಣೆ ವೇಳೆ ಕಳೆದ 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಬಾಂಗ್ಲಾ ಪ್ರಜೆಯೊಬ್ಬನನ್ನ ಭೋಪಾಲ್ ಪೊಲೀಸರು ಬಂಧಿಸಿದ್ದಾರೆ. ‘ನೇಹಾ’ ಎಂಬ ನಕಲಿ ಗುರುತಿನಡಿ ನಗರದಲ್ಲಿ ವಾಸಿಸುತ್ತಿದ್ದ ಬಾಂಗ್ಲಾ ಪ್ರಜೆ ಅಬ್ದುಲ್ ಕಲಾಂ ಎಂಬಾತ ಬಂಧಿತ ಆರೋಪಿ.
10ನೇ ವಯಸ್ಸಿಗೇ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದ ಅಬ್ದುಲ್, 20 ವರ್ಷಗಳನ್ನು ಮುಂಬೈನಲ್ಲಿ ಕಳೆದಿದ್ದಾನೆ. ಕಳೆದ 8 ವರ್ಷದಿಂದ ಭೋಪಾಲ್ನ ಬುದ್ವಾರಾದಲ್ಲಿ ನೆಲೆಸಿರುವ ಅವನು ಮಂಗಳಮುಖಿ ಎಂದು ಹೇಳಿಕೊಂಡು ಸ್ಥಳೀಯ ಹಿಜಡಾ ಸಮುದಾಯದ ಸಕ್ರಿಯ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಪಾಸ್ಪೋರ್ಟ್ ಬಳಸಿಕೊಂಡು ವಿದೇಶಕ್ಕೂ ಪ್ರಯಾಣ :
ಸ್ಥಳೀಯ ಏಜೆಂಟರ ಸಹಾಯದಿಂದ ನಕಲಿ ದಾಖಲೆಗಳನ್ನು ಬಳಸಿಕೊಂಡು ಆಧಾರ್, ಪಡಿತರ ಚೀಟಿ, ಪಾಸ್ಪೋರ್ಟ್ ಸೇರಿದಂತೆ ಪ್ರಮುಖ ದಾಖಲೆಗಳನ್ನ ಪಡೆದುಕೊಂಡಿದ್ದಾರೆ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
‘ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಭಾರತದಲ್ಲಿ ನೆಲೆಸಿದ್ದಲ್ಲದೇ, ನಕಲಿ ಪಾಸ್ಪೋರ್ಟ್ ಬಳಸಿಕೊಂಡು ವಿದೇಶಕ್ಕೂ ಪ್ರಯಾಣ ಮಾಡಿದ್ದಾನೆ. ಬುದ್ವಾರಾದಲ್ಲಿ ಹಲವು ಮನೆಗಳನ್ನು ಬದಲಾಯಿಸಿರುವ ಈತ, ನೇಹಾ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದ. ಮಹಾರಾಷ್ಟ್ರದಲ್ಲೂ ಮಂಗಳಮುಖಿಯಾಗಿ ಸಕ್ರಿಯವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

