ಗದಗ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಂಪಿ ಪುರಾತತ್ವ, ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಂಪಿ ವಿಭಾಗದ ನಿರ್ದೇಶಕ ಶೇಜೇಶ್ವರ ಅವರ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಪತ್ತೆಯಾದ ಆಭರಣಗಳು ಯಾವ ಕಾಲಘಟ್ಟಕ್ಕೆ ಸೇರಿದವು? ಯಾವ ರಾಜವಂಶ ಅಥವಾ ಆಳ್ವಿಕೆಗೆ ಸಂಬಂಧಿಸಿದವು? ಎಂಬ ಕುರಿತು ವೈಜ್ಞಾನಿಕ ಹಾಗೂ ಐತಿಹಾಸಿಕ ತನಿಖೆ ಮುಂದುವರಿದಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, 1962ರ ಪ್ರಾಚೀನ ವಸ್ತುಗಳು ಮತ್ತು ಪುರಾತತ್ವ ನಿಧಿಗಳ ಕಾಯ್ದೆಯ ಅನ್ವಯ 10 ರೂ. ಮೌಲ್ಯಕ್ಕಿಂತ ಹೆಚ್ಚಿನ ವಸ್ತುಗಳು ಸರ್ಕಾರದ ಆಸ್ತಿಯಾಗುತ್ತವೆ. ಭೂಮಿಗೆ ಅಂಟಿಕೊಂಡಿರುವ ಅಥವಾ ಒಂದು ಅಡಿ ಆಳಕ್ಕಿಂತ ಕೆಳಗೆ ಪತ್ತೆಯಾಗುವ ಯಾವುದೇ ನಿಧಿಯೂ ಸರ್ಕಾರಕ್ಕೆ ಸೇರಬೇಕಾಗಿದೆ.
ಆದರೆ, ಪತ್ತೆಯಾದ ನಿಧಿಯ ಮೌಲ್ಯದ ಐದನೇ ಒಂದು ಭಾಗವನ್ನು (20%) ಸಂಬಂಧಿಸಿದ ಕುಟುಂಬಕ್ಕೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕುಟುಂಬಕ್ಕೆ ಯಾವುದೇ ಅನ್ಯಾಯವಾಗದಂತೆ ಪರಿಹಾರವನ್ನು ನಗದು ರೂಪದಲ್ಲೇ ನೀಡಲಾಗುತ್ತದೆ. ಅಲ್ಲದೆ, ಮನೆ ನಿರ್ಮಾಣಕ್ಕೆ ಅಗತ್ಯ ಅನುಮತಿ ಹಾಗೂ ಸಹಕಾರವನ್ನು ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಲಕ್ಕುಂಡಿ ಪ್ರದೇಶದ ಐತಿಹಾಸಿಕ ಮಹತ್ವದ ಹಿನ್ನೆಲೆಯಲ್ಲೇ ಈ ನಿಧಿ ಪತ್ತೆ ಪ್ರಕರಣವು ಜಿಲ್ಲೆಯಲ್ಲಿ ಭಾರೀ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.

