ನವದೆಹಲಿ : ‘‘ಹಿಂದೊಮ್ಮೆ ವ್ಯಕ್ತಿಯೊಬ್ಬರು ನೀವು ಪ್ರಧಾನಿ ಹುದ್ದೆಗೆ ಸ್ಪರ್ಧಿಸಿ ನಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದರು, ಆದರೆ ಆ ಪ್ರಸ್ತಾಪವನ್ನು ನಾನು ನಿರಾಕರಿಸಿದ್ದೆ, ಪ್ರಧಾನಿಯಾಗುವ ಗುರಿ ನನ್ನದಲ್ಲ’’ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಳೆಯ ಘಟನೆಯನ್ನು ನೆನಪಿಸಿಕೊಂಡ ಗಡ್ಕರಿ ಪ್ರಧಾನಿಯಾಗುವುದು ನನ್ನ ಗುರಿಯಲ್ಲ, ನಾನು ನನ್ನ ಮೌಲ್ಯಗಳಿಗೆ ಹಾಗೂ ನನ್ನ ಸಂಸ್ಥೆಗೆ ನಿಷ್ಠನಾಗಿದ್ದೇನೆ, ಯಾವುದೇ ಸ್ಥಾನಕ್ಕೂ ನಾನು ರಾಜಿ ಮಾಡಿಕೊಳ್ಳುವುದಿಲ್ಲ, ಈ ಮೌಲ್ಯವು ಭಾರತದ ಪ್ರಜಾಪ್ರಭುತ್ವದ ಆಧಾರವಾಗಿದೆ ಎಂದರು.
2024 ಮತ್ತು 2019ರ ಲೋಕಸಭೆ ಚುನಾವಣೆ ವೇಳೆ ನಿತಿನ್ ಗಡ್ಕರಿ ಅವರ ಹೆಸರು ಪ್ರಧಾನಿ ಹುದ್ದೆಗೆ ಸಂಭಾವ್ಯ ಅಭ್ಯರ್ಥಿ ಎಂದು ಚರ್ಚೆಗೆ ಬಂದಿತ್ತು. ಈ ವರ್ಷದ ಸಾರ್ವತ್ರಿಕ ಚುನಾವಣೆಗೆ ಮುನ್ನ ಇಂಡಿಯಾ ಟುಡೆಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಂತರ ನರೇಂದ್ರ ಮೋದಿಯ ನಂತರ ಪ್ರಧಾನಿಯಾಗಲು ಮೂರನೇ ಅತ್ಯಂತ ಸೂಕ್ತ ನಾಯಕ ಎಂದು ಶ್ರೇಯಾಂಕ ನೀಡಿತ್ತು.
2019ರಲ್ಲಿಯೂ ಪ್ರಧಾನಿ ಹುದ್ದೆಗೆ ಹೆಸರು ಕೇಳಿಬಂದಿತ್ತು 2019ರಲ್ಲಿ ಕೂಡ ಇದೇ ರೀತಿಯ ಚರ್ಚೆಗಳು ನಡೆದಾಗ ಗಡ್ಕರಿ ತಿರಸ್ಕರಿಸಿದ್ದರು. 2019 ರಲ್ಲಿ, ಗಡ್ಕರಿ ಅವರು ಭಾರತದ ಪ್ರಧಾನಿ ಹುದ್ದೆಯು ನರೇಂದ್ರ ಮೋದಿ ಎಂಬ ಸಮರ್ಥರ ಕೈಯಲ್ಲಿದೆ. ನಾವೆಲ್ಲರೂ ಅವರಿಗೆ ಬೆಂಬಲ ನೀಡಲು ಅವರ ಹಿಂದೆ ಇದ್ದೇವೆ ಎಂದಿದ್ದರು.

