ನವದೆಹಲಿ : ಅಮೆರಿಕದ ನೆಲದಲ್ಲಿ ನಿಂತು ಪರಮಾಣು ಬೆದರಿಕೆ ಹಾಕಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಹೇಳಿಕೆಯನ್ನು ಭಾರತ ಸೋಮವಾರ (ಆಗಸ್ಟ್11) ಖಂಡಿಸಿದ್ದು, ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಕ್ ಸೇನಾ ಮುಖ್ಯಸ್ಥರು ಮಾಡಿರುವ ಹೇಳಿಕೆಗಳ ಬಗ್ಗೆ ನಮ್ಮ ಗಮನ ಸೆಳೆದಿದೆ. ಪರಮಾಣು ದಾಳಿ ಪಾಕ್ನ ಪ್ರಮುಖ ಗುರಿಯಾಗಿದೆ ಎಂದು ಕಿಡಿಕಾರಿದರು.
ಅಲ್ಲದೆ, ಇಂತಹ ಹೇಳಿಕೆಗಳಲ್ಲಿ ಅಂತರ್ಗತವಾಗಿರುವ ಬೇಜವಾಬ್ದಾರಿಯ ಬಗ್ಗೆ ಅಂತರರಾಷ್ಟ್ರೀಯ ಸಮುದಾಯ ತನ್ನದೇ ಆದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಇದು ಪಾಕ್ ಮಿಲಿಟರಿಯು, ಭಯೋತ್ಪಾದಕ ಗುಂಪುಗಳೊಂದಿಗೆ ಕೈಜೋಡಿಸಿದೆ.ಪಾಕ್ನಲ್ಲಿ ಪರಮಾಣು ಆಜ್ಞೆ ಮತ್ತು ನಿಯಂತ್ರಣದ ಬಗ್ಗೆ ಇರುವ ಅನುಮಾನಗಳನ್ನು ಬಲಪಡಿಸುತ್ತದೆ ಎಂದು MEA ತಿಳಿಸಿದೆ.
ಭಾರತ ಯಾವುದೇ ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ನಮ್ಮ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ನಾವು ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಮುನೀರ್ ಹೇಳಿದ್ದೇನು..?
ಭಾರತದ ವಿರುದ್ಧ ಪರಮಾಣು ಬೆದರಿಕೆ ಹಾಕಿರುವ ಮುನೀರ್, ಭವಿಷ್ಯದಲ್ಲಿ ಭಾರತದಿಂದ ತನ್ನ ದೇಶಕ್ಕೆ ಅಸ್ತಿತ್ವದ ಬೆದರಿಕೆ ಎದುರಾದರೆ ಪಾಕಿಸ್ತಾನ ಅರ್ಧ ಜಗತ್ತನ್ನು ನಾಶಪಡಿಸುತ್ತದೆ ಎಂದು ಎಚ್ಚರಿಸಿದ್ದರು. ನಾವು ಪರಮಾಣು ರಾಷ್ಟ್ರ, ನಾವು ಪತನಗೊಳ್ಳುತ್ತಿದ್ದೇವೆ ಎಂದು ನಾವು ಭಾವಿಸಿದರೆ, ನಮ್ಮೊಂದಿಗೆ ಅರ್ಧ ಜಗತ್ತನ್ನು ನಾಶಪಡಿಸುತ್ತೇವೆ ಎಂದು ಟ್ಯಾಂಪಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುನೀರ್ ಹೇಳಿದ್ದರು.
ಭಾರತ ಅಣೆಕಟ್ಟು ಕಟ್ಟುವವರೆಗೆ ನಾವು ಕಾಯುತ್ತೇವೆ. ನಾವು ಅದನ್ನು 10 ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ ಎಂದು ಹೇಳಿದರು.ಅಲ್ಲದೆ, ಸಿಂಧೂ ನದಿ ಭಾರತೀಯರ ಆಸ್ತಿಯಲ್ಲ ಎಂದು ಈ ಸಂದರ್ಭದಲ್ಲಿ ಮುನೀರ್ ಹೇಳಿದ್ದಾರೆ

