ಬೆಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯ ಕತ್ತಿನಿಂದ ಸರ ಎಗರಿಸಿದ ಕಳ್ಳಿಯರನ್ನು ಸ್ಥಳೀಯರು ರೆಡ್ಹ್ಯಾಂಡ್ ಆಗಿ ಹಿಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಅಶೋಕ್ ನಗರದಲ್ಲಿ ನಡೆದಿದೆ.
ಶಿಡ್ಲಘಟ್ಟದಿಂದ ದೇವನಹಳ್ಳಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ವೃದ್ಧೆಯ ಹಿಂದೆ–ಮುಂದೆ ಕುಳಿತುಕೊಂಡು ಕಳ್ಳಿಯರು ಸರ ಕಳವು ಮಾಡಿದ್ದಾರೆ ಎನ್ನಲಾಗಿದೆ. ವೆಂಕಟಮ್ಮ ಎಂಬ ವೃದ್ಧೆಯ ಕತ್ತಿನಿಂದ ಸರ ಎಗರಿಸಿದ್ದು, ಸುಧಾ ಹಾಗೂ ಅನು ಎಂಬವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಸ್ ನಿಲ್ಲಿಸುವ ವೇಳೆ ಸರ ಕಾಣೆಯಾಗಿರುವುದನ್ನು ಗಮನಿಸಿದ ವೃದ್ಧೆ ಗೋಳಾಡುತ್ತಿದ್ದಂತೆ ಕಳ್ಳಿಯರು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಎಚ್ಚೆತ್ತ ಸ್ಥಳೀಯರು ಅವರನ್ನು ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಪಾಯಕಾರಿ ರೀತಿಯಲ್ಲಿ ಕಾರ್ಯಾಚರಿಸಿದ್ದ ಕಳ್ಳಿಯರು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

