Drone Attack : ಸಂಸದೆ ಕನ್ನಿಮೋಳಿ ನೇತೃತ್ವದ ಭಾರತದ ಸಂಸದರ ನಿಯೋಗ ಏರ್ಪೋರ್ಟ್ನಲ್ಲಿ ಇಳಿಯುವಾಗ ಡ್ರೋನ್ ದಾಳಿ ಸಂಭವಿಸಿದೆ. ಆಪರೇಷನ್ ಸಿಂಧೂರ್ ಬಗ್ಗೆ ಇಡೀ ಜಗತ್ತಿಗೆ ಮಾಹಿತಿ ನೀಡಲು ಹಾಗೂ ಪಾಕ್ ಬಣ್ಣ ಬಯಲು ಮಾಡಲು ಸಂಸದರ ನಿಯೋಗ ಹೊರಟಿದೆ. ಅದರಲ್ಲಿ ಈ ಒಂದು ನಿಯೋಗ ರಷ್ಯಾಗೆ ತೆರಳುತ್ತಿತ್ತು.
ಭಾರತೀಯ ಸಂಸದರ ನಿಯೋಗವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ. ಈ ವಿಮಾನದಲ್ಲಿ ಡಿಎಂಕೆ ಸಂಸದೆ ಕನಿಮೋಳಿ ಇದ್ದರು. ಡ್ರೋನ್ ದಾಳಿಯಿಂದಾಗಿ, ಈ ವಿಮಾನವು ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಹಲವಾರು ಗಂಟೆಗಳ ಕಾಲ ಸುತ್ತುತ್ತಲೇ ಇತ್ತು.
ಹಲವಾರು ಗಂಟೆಗಳ ವಿಳಂಬ ಮತ್ತು ಭದ್ರತಾ ಪರಿಸ್ಥಿತಿಗಳ ಮೌಲ್ಯಮಾಪನದ ನಂತರ, ವಿಮಾನವು ಅಂತಿಮವಾಗಿ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಆಪರೇಷನ್ ಸಿಂಧೂರ್ ಬಗ್ಗೆ ಭಾರತದ ನಿಲುವನ್ನು ತಿಳಿಸಲು ಭಾರತದಿಂದ ಆರು ನಿಯೋಗಗಳು ವಿವಿಧ ದೇಶಗಳಿಗೆ ಹೋಗಿವೆ.
ಭಾರತದಿಂದ ರಷ್ಯಾಕ್ಕೆ ತೆರಳಿರುವ ನಿಯೋಗದಲ್ಲಿ ಡಿಎಂಕೆ ಸಂಸದೆ ಕನ್ನಿಮೋಳಿ, ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಆರ್ಜೆಡಿ ಸಂಸದ ಪ್ರೇಮಚಂದ್ ಗುಪ್ತಾ, ಕ್ಯಾಪ್ಟನ್ ಬ್ರಿಜೇಶ್, ಅಶೋಕ್ ಕುಮಾರ್ ಮಿತ್ತಲ್ ಮತ್ತು ರಾಯಭಾರಿ ಮಂಜೀವ್ ಸಿಂಗ್ ಪುರಿ ಸೇರಿದ್ದಾರೆ.

