ಖ್ಯಾತ ಖಳನಟ, ಆರ್ಮುಗ ಖ್ಯಾತಿಯ ಪಿ.ರವಿಶಂಕರ್ ಅವರ ಪುತ್ರ ಅದ್ವೈ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫಸ್ಟ್ ಲುಕ್ ರಿವೀಲ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಮಾಲಾಶ್ರೀ ಅಭಿನಯದ ‘ದುರ್ಗಿ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ರವಿಶಂಕರ್ ಅವರು ಈಗ ಮಗನ ಸಿನಿಮಾಗಾಗಿ ಮತ್ತೆ ನಿರ್ದೇಶನ ಮಾಡುತ್ತಿದ್ದಾರೆ. ಈ ಮೂಲಕ ಬರೋಬ್ಬರಿ 2 ದಶಕದ ಬಳಿಕ ಅವರು ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ.
👉 Please Follow our WhatsApp Channel for BREAKING News
‘ಎಸ್.ಜಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ಪ್ರವೀಣಾ ಕಡಿಯಾಲ ಮತ್ತು ರಮಾ ಲಕ್ಷ್ಮೀ ಪ್ರಸ್ತುತಪಡಿಸುತ್ತಿದ್ದಾರೆ. ರವಿ ಬಸ್ರೂರ್ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಸುಬ್ರಹ್ಮಣ್ಯ’ ಸಿನಿಮಾಗೆ ವಿಘ್ನೇಶ್ ರಾಜ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ವಿಜಯ್ ಎಂ. ಕುಮಾರ್ ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಸೋಶಿಯೋ-ಫ್ಯಾಂಟಸಿ ಅಡ್ವೆಂಚರ್ಸ್ ಶೈಲಿಯ ಸುಬ್ರಹ್ಮಣ್ಯ ಸಿನಿಮಾದ 60% ಕೆಲಸ ಪೂರ್ಣಗೊಂಡಿದ್ದು, ಮುಂಬೈನ ರೆಡ್ ಚಿಲ್ಲಸ್ ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಚೆನ್ನೈನ ಹಲವಾರು ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆ.

