ಬಿಹಾರ: ‘ಇಂದು ಬಿಹಾರದ ಈ ಮಣ್ಣಿನಲ್ಲಿ ನಿಂತು ಇಡೀ ಜಗತ್ತಿಗೆ ಹೇಳುತ್ತಿದ್ದೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಪತ್ತೆಹಚ್ಚಿ, ಗುರುತಿಸಿ ಶಿಕ್ಷಿಸಲಿದೆ. ಈ ಭೂಮಿಯ ತುದಿಯವರೆಗೆ ಹಿಂಬಾಲಿಸುತ್ತೇವೆ. ಭಾರತದ ಚೈತನ್ಯವು ಭಯೋತ್ಪಾದನೆಯಿಂದ ಎಂದಿಗೂ ಮುರಿಯುವುದಿಲ್ಲ. ಭಯೋತ್ಪಾದನೆಗೆ ಶಿಕ್ಷೆಯಾಗದೆ ಉಳಿಯುವುದಿಲ್ಲ. ಈ ದೇಶದ ಜನರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ’ ಎಂದು ಪ್ರಧಾನಿ ಮೋದಿ ಉಗ್ರರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬಿಹಾರದಲ್ಲಿ ಮಾತನಾಡಿದ ಅವರು, ಕೇವಲ ಜನರ ಮೇಲೆ ಮಾಡಿದ ದಾಳಿ ಅದಲ್ಲ ಆ ದಾಳಿ ಭಾರತ ಆತ್ಮದ ಮೇಲಾಗಿದೆ, ಯಾರು ಈ ದುಸ್ಸಾಹಸ ಮಾಡಿದ್ದಾರೋ, ಯಾರು ಈ ದಾಳಿಯ ಹಿಂದಿದ್ದಾರೋ, ಅವರಿ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಅವರಿಗೆ ಕೊಡುತ್ತೇವೆ ಎಂದು ಹೇಳಿದ್ದಾರೆ.
ಭಯೋತ್ಪಾದಕರನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ನಮ್ಮ ಸಂಕಲ್ಪದಲ್ಲಿ ಇಡೀ ರಾಷ್ಟ್ರವು ಒಂದಾಗಿದೆ. ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ. ನಮ್ಮೊಂದಿಗೆ ನಿಂತಿರುವ ವಿವಿಧ ದೇಶಗಳ ಜನರು ಮತ್ತು ಅವರ ನಾಯಕರಿಗೆ ನಾನು ಈ ಸಮಯದಲ್ಲಿ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ಪಹಲ್ಗಾಮ್ನಲ್ಲಿ ಮೃತಪಟ್ಟವರಲ್ಲಿ ಕೆಲವರು ಕನ್ನಡ ಮಾತನಾಡುವವರಿದ್ದರೆ, ಇನ್ನೂ ಕೆಲವರು ಹಿಂದಿ, ಮರಾಠಿ, ಗುಜರಾತಿ, ಒಡಿಯಾಮ ಬಾಂಗ್ಲಾ ಹೀಗೆ ಒಬ್ಬೊಬ್ಬರು ಒಂದು ಭಾಷೆಯನ್ನು ಮಾತನಾಡುವವರಾಗಿದ್ದಾರೆ. ಆದರೆ ಅವರ ಸಾವಿಗೆ ಆಕ್ರೋಶ ಮಾತ್ರ ಕಾರ್ಗಿಲ್ನಿಂದ ಕನ್ಯಾಕುಮಾರಿವರೆಗೂ ಒಂದೇ ರೀತಿ ಆಗಿದೆ ಎಂದರು.
ಭಯೋತ್ಪಾದನೆ ಎದುರು ಭಾರತ ಎಂದೂ ತಲೆ ಬಾಗುವುದಿಲ್ಲ, ಭಾರತದಿಂದ ಭಯೋತ್ಪಾದನೆ ತೊಲಗಿಸುವವರೆಗೂ ಬಿಡುವುದಿಲ್ಲ. ಈ ದಾಳಿ ಕೇವಲ ನಿರಾಯುಧ ಪ್ರವಾಸಿಗರ ಮೇಲೆ ನಡೆದಿಲ್ಲ, ದೇಶದ ಶತ್ರುಗಳು ಭಾರತದ ಆತ್ಮದ ಮೇಲೆ ದಾಳಿ ಮಾಡಲು ಧೈರ್ಯ ಮಾಡಿದ್ದಾರೆ. ಈ ದಾಳಿಯನ್ನು ನಡೆಸಿದ ಭಯೋತ್ಪಾದಕರು ಮತ್ತು ಈ ದಾಳಿಗೆ ಸಂಚು ರೂಪಿಸಿದವರಿಗೆ ಅವರು ಊಹಿಸಲಾಗದಷ್ಟು ದೊಡ್ಡ ಶಿಕ್ಷೆಯನ್ನು ನೀಡಲಾಗುವುದು ಎಂದು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. 140 ಕೋಟಿ ಭಾರತೀಯರ ಇಚ್ಛಾಶಕ್ತಿ ಈಗ ಭಯೋತ್ಪಾದಕರ ಬೆನ್ನು ಮುರಿಯಲಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಕೊಂದ ಕ್ರೌರ್ಯದಿಂದ ಇಡೀ ರಾಷ್ಟ್ರವು ದುಃಖಿತವಾಗಿದೆ. ಇಡೀ ರಾಷ್ಟ್ರವು ಎಲ್ಲಾ ಸಂತ್ರಸ್ತ ಕುಟುಂಬಗಳ ದುಃಖದಲ್ಲಿ ಜೊತೆಗಿದೆ. ಈ ಕುಟುಂಬ ಸದಸ್ಯರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಲು ಸರ್ಕಾರವೂ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.
ಈ ಭಯೋತ್ಪಾದಕ ದಾಳಿಯಲ್ಲಿ, ಯಾರೋ ಒಬ್ಬರು ತಮ್ಮ ಮಗನನ್ನು ಕಳೆದುಕೊಂಡರು, ಯಾರೋ ಒಬ್ಬರು ತಮ್ಮ ಸಹೋದರನನ್ನು ಕಳೆದುಕೊಂಡರು, ಯಾರೋ ಒಬ್ಬರು ತಮ್ಮ ಸಂಗಾತಿಯನ್ನು ಕಳೆದುಕೊಂಡಿದ್ದಾರೆ. ಆ ಎಲ್ಲ ಜನರ ಸಾವಿನ ಬಗ್ಗೆ ನಮ್ಮ ಮನಸ್ಸಿನಲ್ಲಿರುವ ದುಃಖ ಮತ್ತು ಕೋಪ ಒಂದೇ ಆಗಿದೆ ಎಂದರು.

