ಬೆಂಗಳೂರು, ಡಿಸೆಂಬರ್ 27: ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಇದೇ ಡಿಸೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ, ಚಿತ್ರ ಬಿಡುಗಡೆಯಾದ ಕೂಡಲೇ ಪೈರಸಿ ಕಂಟಕವಾಗಿ ಪರಿಣಮಿಸಿದ್ದು, ಸಿನಿಮಾ ತಂಡದ ಆತಂಕಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ಸಿನಿಮಾ ತೆರೆಕಂಡ ಎರಡೇ ದಿನಗಳಲ್ಲಿ 9 ಸಾವಿರಕ್ಕೂ ಅಧಿಕ ಪೈರಸಿ ಲಿಂಕ್ಗಳನ್ನು ತೆಗೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. “ಕಷ್ಟಪಟ್ಟು, ಕೋಟಿ ಕೋಟಿ ರೂಪಾಯಿ ಬಜೆಟ್ ಹಾಕಿ ಸಿನಿಮಾ ಮಾಡಿದವರಿಗೆ ಈ ರೀತಿಯ ಪೈರಸಿ ದೊಡ್ಡ ಹೊಡೆತ. ಹೀಗಾದರೆ ನಿರ್ಮಾಪಕರ ಗತಿ ಏನು?” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆಯೂ ‘ಮ್ಯಾಕ್ಸ್’ ಸಿನಿಮಾಗೆ ಇದೇ ರೀತಿಯ ಪೈರಸಿ ಸಮಸ್ಯೆ ಎದುರಾಗಿತ್ತು. ಆ ವೇಳೆ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಆಗ ಮಾನವೀಯತೆ ತೋರಿಸಿ ಬಿಟ್ಟು ಕಳುಹಿಸಲಾಗಿತ್ತು. “ಈ ಬಾರಿ ಯಾವುದೇ ಮುಲಾಜಿಲ್ಲ. ಸಿಕ್ಕವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ” ಎಂದು ಸುದೀಪ್ ಎಚ್ಚರಿಕೆ ನೀಡಿದ್ದಾರೆ.
45 ಮಂದಿ ಸಿನಿಮಾ ನಿರ್ಮಾಪಕರ ಮಾತುಗಳನ್ನು ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿರುವ ಅವರು, “ಶಿವರಾಜ್ಕುಮಾರ್ ಅವರು ಆರೋಗ್ಯ ಸರಿಯಾಗಿರದಿದ್ದರೂ ಸಿನಿಮಾ ಮಾಡಲು ಬಂದಿದ್ದಾರೆ. ಮೂರು ವರ್ಷಗಳ ಕಾಲ ಶ್ರಮಪಟ್ಟು ಮಾಡಿದ ಸಿನಿಮಾಗೆ ಹೀಗೆ ಆಗುವುದಾದರೆ ತುಂಬಾ ಬೇಜಾರಾಗುತ್ತದೆ” ಎಂದು ಹೇಳಿದ್ದಾರೆ.
ಟೀಕೆಗಳಿಗೆ ಉತ್ತರ ಕೊಡಲು ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಸುದೀಪ್, “ಇಂಟಲಿಜೆನ್ಸ್ ಅಂದರೆ ಸಿಲ್ಲಿಯಾಗಿ ಮಾತಾಡೋ ವಿಷಯವಲ್ಲ. ನಮಗೂ ನಮ್ಮದೇ ಆದ ಮಾಹಿತಿ ವ್ಯವಸ್ಥೆ ಇದೆ. ಸಿನಿಮಾ ಕಾಪಾಡಿಕೊಳ್ಳಿ ಎಂದು ಮಾಹಿತಿ ಬಂದಾಗಲೇ, ನಾನು 48 ಗಂಟೆಗಳ ಮುಂಚೆಯೇ ಪೈರಸಿ ಬಗ್ಗೆ ಎಚ್ಚರಿಕೆ ನೀಡಿದ್ದೆ. ಆದರೆ, ಆ ಮಾತು ಎಲ್ಲೆಲ್ಲೋ ತಪ್ಪಾಗಿ ಹರಡಿತು” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

