ಬೆಂಗಳೂರು: ಬೆಂಗಳೂರು ಮಧುರೈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇರಿದಂತೆ ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕವನ್ನೊಳಗೊಂಡ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಚೆನ್ನೈ ಸೆಂಟ್ರಲ್ ಹಾಗೂ ನಾಗರ್ಕೋಯಿಲ್, ಮೀರತ್ ಹಾಗೂ ಲಖನೌ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲುಗಳಿಗೂ ಚಾಲನೆ ನೀಡಲಾಗಿದೆ.
ಈ ರೈಲುಗಳು ಉತ್ತರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕಕ್ಕೆ ಸಂಪರ್ಕ ವೃದ್ಧಿಸಲಿವೆ. ಹೊಸ ವಂದೇ ಭಾರತ್ ರೈಲುಗಳು ಪ್ರಯಾಣಿಕರಿಗೆ ವಿಶ್ವದರ್ಜೆಯ ಪ್ರಯಾಣದ ಅನುಭವ ನೀಡುತ್ತವೆ, ಪ್ರಯಾಣದ ಅವಧಿ ತಗ್ಗಿಸುತ್ತವೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಿವೆ.
ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ದೃಷ್ಟಿಕೋನದಡಿ ಈ ಉಪಕ್ರಮ ಕೈಗೊಳ್ಳಲಾಗಿದ್ದು, ಅತ್ಯಾಧುನಿಕ ರೈಲುಗಳು ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ ಎಂದು ಎಕ್ಸ್ ಸಂದೇಶದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.
ಮಧುರೈ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ವಂದೇ ಭಾರತ್ ರೈಲು ಮಂಗಳವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ಈ ವಂದೇ ಭಾರತ್ ರೈಲು ಸೇವೆಯು ತಮಿಳುನಾಡಿನ ಮಧುರೈನ ದೇವಾಲಯ ನಗರವನ್ನು ಕರ್ನಾಟಕದ ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರದೊಂದಿಗೆ ಸಂಪರ್ಕಿಸುತ್ತದೆ.
ರೈಲು ಸಂಖ್ಯೆ 20671 ಮಧುರೈನಿಂದ ಬೆಳಿಗ್ಗೆ 5:15 ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ. ಪ್ರತಿಯಾಗಿ (ಟ್ರೇನ್ ಸಂಖ್ಯೆ 20672)ಬೆಂಗಳೂರಿನಿಂದ ಮಧ್ಯಾಹ್ನ 1:30 ಕ್ಕೆ ಹೊರಡುವ ವಂದೇ ಭಾರತ್ ರೈಲು ರಾತ್ರಿ 9:45ಕ್ಕೆ ಮಧುರೈಗೆ ತಲುಪಲಿದೆ.
ಮಧುರೈ ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ದಿಂಡುಗಲ್, ತಿರುಚಿರಾಪಳ್ಳಿ, ಕರೂರ್, ನಾಮಕ್ಕಲ್, ಸೇಲಂ ಮತ್ತು ಕೃಷ್ಣರಾಜಪುರಂನಲ್ಲಿ ನಿಲುಗಡೆ ಹೊಂದಿದೆ.
ರಾಜ್ಯದಲ್ಲಿ ಸದ್ಯ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲುಗಳು
ಚೆನ್ನೈ – ಬೆಂಗಳೂರು – ಮೈಸೂರು ಮಾರ್ಗದಲ್ಲಿ 2 ರೈಲು
ಬೆಂಗಳೂರು – ಹುಬ್ಬಳ್ಳಿ- ಧಾರವಾಡ
ಹೈದರಾಬಾದ್ – ಬೆಂಗಳೂರು
ಮಂಗಳೂರು – ಗೋವಾ (ಮಡಗಾಂವ್)
ತಿರುವನಂತಪುರ – ಮಂಗಳೂರು
ಕಲಬುರಗಿ – ಬೆಂಗಳೂರು