ದಾವಣಗೆರೆ, ಸುದ್ದಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ನೇತೃತ್ವದಲ್ಲಿ ಕನಿಷ್ಠ ಬೆಂಬಲ ಬೆಲೆ (MSP) ಕಾಯ್ದೆಗೆ ಒತ್ತಾಯಿಸಿ ದಾವಣಗೆರೆಯಲ್ಲಿ ನಡೆದ ಮೂರನೇ ದಿನದ ಮಹಾ ಪ್ರತಿಭಟನೆಗೆ ಇಂದು ಮತ್ತಷ್ಟು ತೀವ್ರತೆ ದೊರೆಯಿತು.
ಪ್ರತಿಭಟನಾ ವೇದಿಕೆಯಲ್ಲಿ ರೈತರು ಮೆಕ್ಕೆಜೋಳ ಹಾಗೂ ಭತ್ತಕ್ಕೆ ₹3,500 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಬಲವಾದ ಬೇಡಿಕೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಉಪಸ್ಥಿತರಿದ್ದು, ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಅಧ್ಯಕ್ಷ ಹುಚ್ಚೇನಳ್ಳಿ ಮಂಜುನಾಥ್, ತೇಜಸ್ವಿ ಪಾಟೀಲ್, ತಾಲೂಕು ಅಧ್ಯಕ್ಷರು ಯೇಲೋಲಹಳ್ಳಿ ರವಿಕುಮಾರ್, ಗಂಡುಗಲಿ ಕುಮಾರ್, ಪ್ರಭಾಕರ್, ಆಂಜನಪ್ಪ ಸೇರಿದಂತೆ ಹಲವು ರೈತ ನಾಯಕರು ಹಾಗೂ ಸದಸ್ಯರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದರು.
ರೈತರ ಒತ್ತಾಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗಿದ್ದು, ಆ ಅವಧಿಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಸಂಘದ ರಾಜ್ಯ ಅಧ್ಯಕ್ಷ ಹುಚ್ಚೇನಳ್ಳಿ ಮಂಜುನಾಥ್ ಘೋಷಿಸಿದರು.ರೈತ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಮುಂದಿನ ಹಂತದ ಹೋರಾಟದ ತಂತ್ರ ಜಾರಿ ಮಾಡಲು ಸಂಘ ಸಿದ್ಧತೆ ನಡೆಸುತ್ತಿದೆ.

