ಬೆಂಗಳೂರು, ಏ.5: ಐಪಿಎಲ್ 2026ರ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಇಂದು ನಗರದಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಮುಖಾಮುಖಿಯಾಗುತ್ತಿವೆ. ‘ಸೌತ್ ಡರ್ಬಿ’ ಎಂದೇ ಪ್ರಸಿದ್ಧಿಯಾದ ಈ ಪೈಪೋಟಿಯಲ್ಲಿ ಗೆಲ್ಲೋರು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಗರಿಗೆದರಿದೆ.
ಪ್ರಸ್ತುತ ಫಾರ್ಮ್ ಗಮನಿಸಿದರೆ, ಆರ್ಸಿಬಿ ತಂಡದ ಪಾಳಯ ಭರ್ಜರಿ ಲಯದಲ್ಲಿದೆ. ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ಗಳ ಗೆಲುವು ಸಾಧಿಸಿರುವ ಆರ್ಸಿಬಿ, ಇದೇ ಉತ್ಸಾಹವನ್ನು ಮುಂದುವರಿಸಲು ಸಜ್ಜಾಗಿದೆ. ಅಂಕಿಅಂಶಗಳ ಪ್ರಕಾರ ಇಂದಿನ ಪಂದ್ಯದಲ್ಲಿ ಆರ್ಸಿಬಿಗೆ 60.9% ಗೆಲುವಿನ ಸಾಧ್ಯತೆ ಇದೆ.
ಇನ್ನೊಂದೆಡೆ, ಸಿಎಸ್ಕೆ ತಂಡ ಆರಂಭಿಕ ಎರಡು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡು ಒತ್ತಡದಲ್ಲಿದೆ. ತವರಿನಲ್ಲೇ ಬಲಿಷ್ಠ ಆರ್ಸಿಬಿಯನ್ನು ಮಣಿಸುವುದು ಸಿಎಸ್ಕೆಗಾಗಿ ಸವಾಲಾಗಿರಲಿದೆ.
ಐಪಿಎಲ್ ಇತಿಹಾಸವನ್ನು ನೋಡಿದರೆ ಸಿಎಸ್ಕೆ ಮೇಲುಗೈ ಸಾಧಿಸಿದೆ:
ಒಟ್ಟು ಪಂದ್ಯಗಳು: 35
ಸಿಎಸ್ಕೆ ಜಯ: 21
ಆರ್ಸಿಬಿ ಜಯ: 13
1 ಪಂದ್ಯ ರದ್ದು
ಆದರೆ ಬೆಂಗಳೂರಿನ ಮೈದಾನದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನೀಡಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 11 ಪಂದ್ಯಗಳಲ್ಲಿ ಆರ್ಸಿಬಿ 6 ಬಾರಿ, ಸಿಎಸ್ಕೆ 5 ಬಾರಿ ಗೆದ್ದಿದೆ.
ಪಿಚ್ ವರದಿ ಪ್ರಕಾರ, ಚಿನ್ನಸ್ವಾಮಿ ಮೈದಾನ ಬ್ಯಾಟರ್ಗಳಿಗೆ ಸ್ವರ್ಗವೇ ಸರಿ. ಚಿಕ್ಕ ಬೌಂಡರಿಗಳ ಕಾರಣ ರನ್ ಮಳೆ ಸುರಿಯುವ ಸಾಧ್ಯತೆ ಇದೆ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಗುರಿ ಬೆನ್ನಟ್ಟುವುದು ಇಲ್ಲಿ ಯಶಸ್ಸಿನ ಸೂತ್ರವಾಗಿದೆ.
ಟ್ರಾಫಿಕ್ ಅಲರ್ಟ್ & ಮೆಟ್ರೋ ಸೇವೆ ವಿಸ್ತರಣೆ
ಪಂದ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಚಾರ ನಿಯಂತ್ರಣ ಕಟ್ಟು ನಿಟ್ಟಾಗಿದೆ. ಮೆಟ್ರೋ ಸೇವೆಯನ್ನು ರಾತ್ರಿ 11ರಿಂದ ಮುಂದಿನ ದಿನ ಬೆಳಿಗ್ಗೆ 2ರವರೆಗೆ ವಿಸ್ತರಿಸಲಾಗಿದೆ. ಜೊತೆಗೆ ಬಿಎಂಟಿಸಿ ವಿಶೇಷ ಬಸ್ ವ್ಯವಸ್ಥೆಯೂ ಕಲ್ಪಿಸಲಾಗಿದೆ.
ನಗರದ ಪ್ರಮುಖ ರಸ್ತೆಗಳಾದ ಕ್ವೀನ್ಸ್ ರಸ್ತೆ, ಎಂ.ಜಿ ರಸ್ತೆ, ಕಬ್ಬನ್ ರಸ್ತೆ, ಕಸ್ತೂರಬಾ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಕ್ರೀಡಾಂಗಣ ಸುತ್ತಮುತ್ತ ಸಂಚಾರ ದಟ್ಟಣೆ ಇರುವುದರಿಂದ ಸಾರ್ವಜನಿಕರು ಮೆಟ್ರೋ ಹಾಗೂ ಸಾರ್ವಜನಿಕ ಸಾರಿಗೆ ಬಳಸುವಂತೆ ಸೂಚಿಸಲಾಗಿದೆ.

