ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಹಿಂದೂ ದೇವತೆಗಳ ಕುರಿತು ಮಾಡಿದ ಟೀಕೆಗಳು ಮತ್ತೊಂದು ದೊಡ್ಡ ರಾಜಕೀಯ ವಿವಾದಕ್ಕೆ ಕಾರಣರಾಗಿವೆ. ಈ ಹೇಳಿಕೆಗಳು ಹಿಂದೂ ನಂಬಿಕೆಗಳಿಗೆ ಅವಮಾನ ಮಾಡುತ್ತವೆ ಹಾಗೂ ತಕ್ಷಣ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಮತ್ತು ಬಿಆರ್ಎಸ್ ಪಕ್ಷಗಳು ಆರೋಪ ಮಾಡಿವೆ.
ಸಾರ್ವಜನಿಕ ಭಾಷಣಗಳಲ್ಲಿ ರೇವಂತ್ ರೆಡ್ಡಿ ಪದೇಪದೇ ಹಿಂದೂ ಆಚರಣೆಗಳನ್ನು ಗುರಿಯಾಗಿಸುತ್ತಿದ್ದಾರೆ ಎಂದು ರಾಜಕೀಯ ಪ್ರತಿಸ್ಪರ್ಧಿಗಳು ಆರೋಪಿಸುತ್ತಿದ್ದು, ಈ ವಿವಾದ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಇತ್ತೀಚಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ರೇವಂತ್ ರೆಡ್ಡಿ ಅವರು ವಿವಿಧ ಹಿಂದೂ ದೇವತೆಗಳ ಆರಾಧನೆಯ ಪದ್ಧತಿಯನ್ನು ಅಪಹಾಸ್ಯ ಮಾಡಿದ ರೀತಿಯ ಹೇಳಿಕೆ ನೀಡಿದ ನಂತರ ವಿವಾದ ತೀವ್ರಗೊಂಡಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಹೇಳಿಕೆಗಳನ್ನು ಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿ ನೀಡುವುದು ಸೂಕ್ತವಲ್ಲ ಎಂದು ವಿರೋಧ ಪಕ್ಷಗಳು ಕಿಡಿಕಾರಿವೆ.
ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ,
“ಹಿಂದೂಗಳು ಎಷ್ಟು ದೇವರನ್ನು ನಂಬುತ್ತಾರೆ? ಮೂರು ಕೋಟಿಯೇ? ಏಕೆ ಇಷ್ಟು ದೇವರುಗಳು? ಅವಿವಾಹಿತರಿಗೆ ಒಬ್ಬ ದೇವರು – ಹನುಮಂತ. ಎರಡು ಬಾರಿ ಮದುವೆಯಾದವರಿಗೆ ಮತ್ತೊಬ್ಬ. ಮದ್ಯಪಾನ ಮಾಡುವವರಿಗೆ ಇನ್ನೊಬ್ಬ. ಕೋಳಿ ಬಲಿಗೆ ಒಂದು ದೇವರು, ಬೇಳೆ ಹಾಗೂ ಅಕ್ಕಿಗೆ ಮತ್ತೊಂದು ದೇವರು. ಪ್ರತಿ ಗುಂಪಿಗೆ ತನ್ನದೇ ಆದ ದೇವರು ಇರುವಂತಾಗಿದೆ” ಎಂದು ಹೇಳಿದರು.
ಈ ಹೇಳಿಕೆಗಳ ವಿರುದ್ಧ ಮೊದಲಾಗಿ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಮುಖಂಡ ಚಿಕ್ಕೋಟಿ ಪ್ರವೀಣ್ ಮಾತನಾಡಿ, “ಇದು ಕೋಟ್ಯಂತರ ಹಿಂದೂ ಭಕ್ತರಿಗೆ ಅವಮಾನ. ತೆಲಂಗಾಣದಾದ್ಯಂತ ಹಿಂದೂಗಳು ಈ ಹೇಳಿಕೆಯಿಂದ ನೋವಿಗೆ ಒಳಗಾಗಿದ್ದಾರೆ. ಕಾಂಗ್ರೆಸ್ ಮತ್ತು ರೇವಂತ್ ರೆಡ್ಡಿಗೆ ನಾಚಿಕೆ ಎಂಬುದೇ ಇಲ್ಲ. ಮುಖ್ಯಮಂತ್ರಿಗಳು ತಕ್ಷಣ ಕ್ಷಮೆಯಾಚಿಸಿ ಹೇಳಿಕೆಯನ್ನು ಹಿಂಪಡೆಯಬೇಕು” ಎಂದು ಹೇಳಿದರು. ವಿವಾದ ದಿನೇದಿನೇ ರಾಜಕೀಯವಾಗಿ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ರಾಜ್ಯದ ರಾಜಕೀಯಕ್ಕೆ ಇನ್ನಷ್ಟು ಬಿಸಿಮಾಡುವ ಸಾಧ್ಯತೆ ಕಾಣುತ್ತಿದೆ.

