ನವದೆಹಲಿ, ಫೆಬ್ರವರಿ 16: ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಈ ಕುರಿತ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ 9 ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿದ್ದು, ಏಪ್ರಿಲ್ 7ರಿಂದ ವಿಚಾರಣೆ ಆರಂಭವಾಗಲಿದೆ.
ಸಿಜೆಐ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು ಇಂದು ಪ್ರಕರಣವನ್ನು 9 ನ್ಯಾಯಾಧೀಶರ ಪೀಠದ ಮುಂದೆ ಉಲ್ಲೇಖಿಸಲು ಆದೇಶ ನೀಡಿತು. 9 ನ್ಯಾಯಾಧೀಶರ ಪೀಠದ ಅಂತಿಮ ಸಂಯೋಜನೆಯನ್ನು ಮುಖ್ಯ ನ್ಯಾಯಮೂರ್ತಿಗಳು ಆಡಳಿತಾತ್ಮಕ ಆದೇಶದ ಮೂಲಕ ಪ್ರತ್ಯೇಕವಾಗಿ ಪ್ರಕಟಿಸಲಿದ್ದಾರೆ.
ಶಬರಿಮಲೆ ತೀರ್ಪಿನ ಪುನರ್ ಪರಿಶೀಲನೆಯನ್ನು ಬೆಂಬಲಿಸುವ ಪಕ್ಷಗಳು ಏಪ್ರಿಲ್ 7ರಿಂದ 9ರವರೆಗೆ ವಾದ ಮಂಡಿಸಲಿವೆ. ವಿರೋಧ ಪಕ್ಷಗಳಿಗೆ ಏಪ್ರಿಲ್ 14ರಿಂದ 16ರವರೆಗೆ ವಾದ ಮಂಡಿಸಲು ದಿನಾಂಕ ನಿಗದಿಯಾಗಿದೆ. ಮರುಪ್ರತ್ಯಾರೋಪ ಸಲ್ಲಿಕೆಗಳು ಏಪ್ರಿಲ್ 21ರಂದು ನಡೆಯಲಿದ್ದು, ವಿಚಾರಣೆ ಏಪ್ರಿಲ್ 22ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
2018ರ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಪೀಠವು ಶಬರಿಮಲೆ ಪ್ರವೇಶಕ್ಕೆ ಅನುಮತಿ ನೀಡಿದ ತೀರ್ಪು ನೀಡಿತ್ತು. ಆದರೆ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ಮಹಿಳೆಯರ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ತೀರ್ಪಿನ ನಂತರ ಅಕ್ಟೋಬರ್ ತಿಂಗಳಲ್ಲಿ ಹಲವು ಹಿಂದೂಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ತೀರ್ಪಿನ ಮರುಪರಿಶೀಲನೆಗಾಗಿ ಸಲ್ಲಿಸಲಾದ ಅರ್ಜಿಯನ್ನು ಕೋರ್ಟ್ ಕೈಗೆತ್ತಿಕೊಂಡಿದೆ.
ಇದರ ಜೊತೆಗೆ ದರ್ಗಾ ಅಥವಾ ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ, ಪಾರ್ಸಿ ಮಹಿಳೆಯರ ಅಗ್ನಿ ದೇವಾಲಯ ಪ್ರವೇಶ, ದಾವೂದಿ ಬೊಹ್ರಾ ಸಮುದಾಯದಲ್ಲಿ ಬಹಿಷ್ಕಾರ ಹಾಗೂ ಸ್ತ್ರೀ ಜನನಾಂಗ ಛೇದನ ಪದ್ಧತಿಗಳ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿಗಳನ್ನೂ ಪಟ್ಟಿ ಮಾಡಲಾಗಿದೆ.
ಇನ್ನು ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಕೇರಳ ಸರ್ಕಾರ ಬೆಂಬಲ ವ್ಯಕ್ತಪಡಿಸಿದ್ದರೆ, ನಿರ್ಬಂಧವನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆ.

