ಮುಂಬೈ, ಮಾರ್ಚ್ 23: ಇರಾನ್–ಅಮೆರಿಕ ನಡುವಿನ ಉದ್ವಿಗ್ನತೆ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾದ ಸಂಘರ್ಷದ ಭೀತಿಯಿಂದ ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಭಾರೀ ಕುಸಿತಕ್ಕೆ ಒಳಪಟ್ಟಿದೆ.
ಆರಂಭಿಕ ವಹಿವಾಟಿನಲ್ಲೇ ಬಿಎಸ್ಇ ಸೆನ್ಸೆಕ್ಸ್ ಸುಮಾರು 1,400ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದರೆ, ಎನ್ಎಸ್ಇ ನಿಫ್ಟಿ ಶೇ.2ರಷ್ಟು ಇಳಿಕೆ ಕಂಡು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.
ವ್ಯಾಪಾರದ ಮಧ್ಯಂತರ ವೇಳೆಗೆ ಸೆನ್ಸೆಕ್ಸ್ ಸುಮಾರು 1,555 ಪಾಯಿಂಟ್ಸ್ ಕುಸಿದು 72,977 ಮಟ್ಟಕ್ಕೆ ತಲುಪಿದರೆ, ನಿಫ್ಟಿ 480 ಪಾಯಿಂಟ್ಸ್ ಇಳಿಕೆಯಾಗಿ 22,634 ಮಟ್ಟದಲ್ಲಿ ವಹಿವಾಟು ನಡೆಸಿತು. ಈ ಒಂದೇ ದಿನದ ಕುಸಿತದಿಂದ ಹೂಡಿಕೆದಾರರ ಸುಮಾರು 5 ಲಕ್ಷ ಕೋಟಿ ರೂಪಾಯಿ ಸಂಪತ್ತು ಕರಗಿದಂತೆ ಅಂದಾಜಿಸಲಾಗಿದೆ.
ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಹಾಗೂ ವಿದೇಶಿ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವುದು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ತೈಲ ಬೆಲೆ ಏರಿಕೆಯ ಆತಂಕ:
ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟ ವ್ಯತ್ಯಯ ಉಂಟಾಗುವ ಭೀತಿಯಿಂದ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ 113 ಡಾಲರ್ ದಾಟಿದೆ. ಇದು ಭಾರತದಂತಹ ಆಮದು ಅವಲಂಬಿತ ಆರ್ಥಿಕತೆಗೆ ಒತ್ತಡ ತರುವ ಸಾಧ್ಯತೆ ಇದೆ.
ಇನ್ನೊಂದೆಡೆ, ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಇತಿಹಾಸದಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದು 93.84ಕ್ಕೆ ತಲುಪಿದ್ದು, ಇದು ಮಾರುಕಟ್ಟೆ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ.

