ನಿಜಾಮಾಬಾದ್ (ತೆಲಂಗಾಣ), ಜನವರಿ 09: ಗಂಡನ 2 ಕೋಟಿ ರೂ.ಗಳಿಗಿಂತ ಅಧಿಕ ಮೌಲ್ಯದ ವಿಮಾ ಹಣಕ್ಕಾಗಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಹತ್ಯೆ ಮಾಡಿದ ಭೀಕರ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮಕ್ಲೂರು ಮಂಡಲದಲ್ಲಿ ಬೆಳಕಿಗೆ ಬಂದಿದೆ. ಮೃತನನ್ನು ಪಲ್ನಾಟಿ ರಮೇಶ್ ಎಂದು ಗುರುತಿಸಲಾಗಿದ್ದು, ಈ ಪ್ರಕರಣದಲ್ಲಿ ಪತ್ನಿ ಸೌಮ್ಯ ಹಾಗೂ ಆಕೆಯ ಪ್ರಿಯಕರ ದಿಲೀಪ್ ಪ್ರಮುಖ ಆರೋಪಿಗಳಾಗಿದ್ದಾರೆ. ಇಬ್ಬರೂ ಸೇರಿದಂತೆ ಗುತ್ತಿಗೆ ಕೊಲೆ ತಂಡದ ಸದಸ್ಯರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಮೇಶ್ ಮಕ್ಲೂರು ಮಂಡಲದ ಬೋರ್ಗಮ್ (ಕೆ) ಗ್ರಾಮದ ನಿವಾಸಿಯಾಗಿದ್ದು, ಸುಮಾರು 13 ವರ್ಷಗಳ ಹಿಂದೆ ಸೌಮ್ಯ ಅವರನ್ನು ವಿವಾಹವಾಗಿದ್ದರು. ರಮೇಶ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಸೌಮ್ಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ತನಿಖೆಯ ವೇಳೆ, ಸೌಮ್ಯ ತನ್ನದೇ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕ ದಿಲೀಪ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬುದು ಬೆಳಕಿಗೆ ಬಂದಿದೆ.
ಇದೇ ವಿಚಾರವಾಗಿ ಪತಿ-ಪತ್ನಿಯ ನಡುವೆ ನಿರಂತರ ಜಗಳ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಸೌಮ್ಯ ಗಂಡನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ಗುತ್ತಿಗೆ ಹಂತಕರನ್ನು ನೇಮಿಸಿಕೊಂಡು, ತನ್ನ ಉಂಗುರವನ್ನು ಒತ್ತೆಯಿಟ್ಟು ಮುಂಗಡವಾಗಿ 35,000 ರೂ. ನೀಡಿದ್ದಾಳೆ ಎನ್ನಲಾಗಿದೆ.
ಆಗಸ್ಟ್ 2025ರಲ್ಲಿ ಅಪಘಾತದ ಮೂಲಕ ರಮೇಶ್ನನ್ನು ಕೊಲೆ ಮಾಡಲು ಯತ್ನ ನಡೆದಿದ್ದು, ಅದರಿಂದ ಆತ ಪಾರಾಗಿದ್ದ. ಈ ಕುರಿತು ರಮೇಶ್ ಮಕ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಳಿಕ ಡಿಸೆಂಬರ್ 19ರ ರಾತ್ರಿ, ಊಟದ ನಂತರ ಸೌಮ್ಯ ಹತ್ತು ನಿದ್ರೆ ಮಾತ್ರೆಗಳನ್ನು ನೀರಿನಲ್ಲಿ ಬೆರೆಸಿ ರಮೇಶ್ಗೆ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ. ಆತ ಗಾಢ ನಿದ್ರೆಗೆ ಜಾರಿದ ಬಳಿಕ, ಸೌಮ್ಯ ತನ್ನ ಪ್ರಿಯಕರ ದಿಲೀಪ್ಗೆ ಕರೆ ಮಾಡಿದ್ದಾಳೆ. ಗುತ್ತಿಗೆ ಹಂತಕರು ಲಭ್ಯವಾಗದ ಕಾರಣ, ಇಬ್ಬರೂ ಸೇರಿ ರಮೇಶ್ನ ಕತ್ತು ಹಿಸುಕಿ ಹಾಗೂ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ.
ನಂತರ ರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಿ, ಯಾವುದೇ ಅನುಮಾನ ಮೂಡದಂತೆ ಅಂತ್ಯಕ್ರಿಯೆಯ ಎಲ್ಲಾ ವಿಧಿಗಳನ್ನು ನೆರವೇರಿಸಿದ್ದರು. ಆದರೆ ಈ ಪ್ರಕರಣದಲ್ಲಿ ಇಸ್ರೇಲ್ನಲ್ಲಿ ವಾಸಿಸುತ್ತಿರುವ ರಮೇಶ್ ಸಹೋದರ ಕೇತಿರ್ ಅನುಮಾನಗೊಂಡು ವಿದೇಶದಿಂದಲೇ ಮಕ್ಲೂರು ಪೊಲೀಸರಿಗೆ ದೂರು ನೀಡಿದರು. ಇದರಿಂದ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿತು.
ದೂರು ಆಧರಿಸಿ ಪೊಲೀಸರು ಡಿಸೆಂಬರ್ 24ರಂದು ರಮೇಶ್ ಶವವನ್ನು ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಿದರು. ಶವಪರೀಕ್ಷೆಯಲ್ಲಿ ಕೊಲೆ ನಡೆದಿರುವುದು ದೃಢಪಟ್ಟಿತು. ಮುಂದಿನ ತನಿಖೆಯಲ್ಲಿ ರಮೇಶ್ 2 ಕೋಟಿ ರೂ.ಗಳಿಗಿಂತ ಅಧಿಕ ಮೌಲ್ಯದ ಹಲವಾರು ವಿಮಾ ಪಾಲಿಸಿಗಳನ್ನು ಹೊಂದಿದ್ದನು ಎಂಬುದು ಬೆಳಕಿಗೆ ಬಂದಿದ್ದು, ಇದೇ ಹಣದ ಲಾಲಸೆಯಿಂದ ಪತ್ನಿ ಪ್ರಿಯಕರನೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಸೌಮ್ಯ, ದಿಲೀಪ್, ಅಭಿಷೇಕ್ ಹಾಗೂ ಗುತ್ತಿಗೆ ಕೊಲೆ ತಂಡದ ಇನ್ನಿತರ ಸದಸ್ಯರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

