ನವದೆಹಲಿ: ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತವಾಗಿರುತ್ತದೆ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಹೇಳಿದ್ದಾರೆ .ದೆಹಲಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು 2016ರ ಢಾಕಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಹೋಲಿಸಿ ಈ ಹೇಳಿಕೆ ನೀಡಿದ್ದಾರೆ.
ಕಳೆದ 1,400 ವರ್ಷಗಳಲ್ಲಿ ಇಸ್ಲಾಂ ವಿಕಸನಗೊಂಡಿಲ್ಲ. ಅದು ವಿಕಸನಗೊಳ್ಳುವವರೆಗೆ ಭಯೋತ್ಪಾದಕರನ್ನು ಬೆಳೆಸುತ್ತಲೇ ಇರುತ್ತದೆ. 2016ರ ಢಾಕಾ ದಾಳಿಯಲ್ಲಿ ಕಲ್ಮಾವನ್ನು ಪಠಿಸದ್ದಕ್ಕೆ ಜನರನ್ನು ಹತ್ಯೆ ಮಾಡಲಾಯಿತು. ನಮ್ಮ ನಂಬಿಕೆ ವಿವೇಚನೆ ಮತ್ತು ಮಾನವೀಯತೆಯನ್ನು ಮೀರಿದಾಗ ಹೀಗೆ ಆಗುತ್ತದೆ ಎಂದು ತಿಳಿಸಿದರು.
ಯುರೋಪ್ನಲ್ಲಿ ಚರ್ಚುಗಳು ವಸ್ತುಸಂಗ್ರಹಾಲಯಗಳಾಗಿ ಬದಲಾಗುತ್ತಿದ್ದರೆ ಮುಸ್ಲಿಮರು ಎಲ್ಲೆಡೆ ಮಸೀದಿಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಾವಿರಾರು ಮಸೀದಿಗಳು ನಿರ್ಮಾಣವಾಗಿದ್ದರೂ ಮತ್ತಷ್ಟು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಮತ್ತಷ್ಟು ಜಿಹಾದಿಗಳು ತಯಾರಾಗುತ್ತಾರೆ. ಯಾವುದೇ ಮದರಸಾಗಳು ಇರಬಾರದು. ಮಕ್ಕಳು ಒಂದು ಪುಸ್ತಕವನ್ನು ಮಾತ್ರ ಓದಬಾರದು, ಎಲ್ಲಾ ಪುಸ್ತಕಗಳನ್ನು ಓದಬೇಕು ಎಂದು ಅಭಿಪ್ರಾಯಪಟ್ಟರು.
UCCಗೆ ಬೆಂಬಲ :
ಪ್ರತಿಯೊಂದು ನಾಗರಿಕ ದೇಶವೂ ಏಕರೂಪ ನಾಗರೀಕ ಸಂಹಿತೆಯನ್ನು (UCC) ಹೊಂದಿರಬೇಕು ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ. ಸಂಸ್ಕೃತಿ, ಧರ್ಮ ಅಥವಾ ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಭದ್ರತೆಯನ್ನು ರಾಜಿ ಮಾಡಿಕೊಂಡರೆ ನಾವು ಆ ಸಂಸ್ಕೃತಿಯನ್ನು ಪ್ರಶ್ನಿಸಬೇಕು. ತನ್ನ ಜನಸಂಖ್ಯೆಯ ಅರ್ಧದಷ್ಟು ಜನರನ್ನು ರಕ್ಷಿಸಲು ಸಾಧ್ಯವಾಗದ ಸಮಾಜವು ವಿಫಲ ಸಮಾಜವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

