ನವದೆಹಲಿ: ಮಾಲಿಯಲ್ಲಿ ಮೂವರು ಭಾರತೀಯ ಪ್ರಜೆಗಳ ಅಪಹರಣದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಘಟನೆಯನ್ನು ಬಲವಾಗಿ ಖಂಡಿಸಿದೆ. ಇದನ್ನು ‘ಖಂಡನೀಯ ಹಿಂಸಾಚಾರದ ಕೃತ್ಯ’ ಎಂದು ಕರೆದಿದ್ದು, ಅವರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಪಶ್ಚಿಮ ಆಫ್ರಿಕಾದ ದೇಶವನ್ನು ಒತ್ತಾಯಿಸಿದೆ.
ಕಾರ್ಮಿಕರನ್ನು ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ಬಿಡುಗಡೆ ಮಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಭಾರತ ಅಧಿಕೃತವಾಗಿ ಒತ್ತಾಯಿಸಿದೆ. ಸಶಸ್ತ್ರ ದಾಳಿಕೋರರು ಫ್ಯಾಕ್ಟರಿ ಆವರಣದ ಮೇಲೆ ಸಂಘಟಿತ ದಾಳಿ ನಡೆಸಿ ಬಲವಂತವಾಗಿ ಭಾರತೀಯರನ್ನು ಒತ್ತೆಯಾಳುಗಳಾಗಿ ಒಯ್ದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೆಂಡ ಕಾರಿದೆ.
ಬಮಾಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂಬಂಧಿತ ಅಧಿಕಾರಿಗಳು, ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳು ಹಾಗೂ ಡೈಮಂಡ್ ಸಿಮೆಂಟ್ ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂವಹನದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಪಹರಣಕ್ಕೊಳಗಾದ ಭಾರತೀಯ ಪ್ರಜೆಗಳ ಕುಟುಂಬ ಸದಸ್ಯರೊಂದಿಗೂ ಇದು ಸಂಪರ್ಕದಲ್ಲಿದೆ.
ಕಯೇಸ್ ನ ಡೈಮಂಡ್ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ಕಾರ್ಮಿಕರನ್ನು ಜುಲೈ 1ರಂದು ಫ್ಯಾಕ್ಟರಿ ಆವರಣದಲ್ಲಿ ನಡೆದ ಸಂಘಟಿತ ದಾಳಿಯಲ್ಲಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದೆ.
ಈ ಅಪಹರಣದ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಹೊತ್ತಿಲ್ಲ. ಮಾಲಿಯಲ್ಲಿ ಅದೇ ದಿನ ನಡೆದ ಹಲವು ದಾಳಿ ಘಟನೆಗಳ ಹೊಣೆಯನ್ನು ಅಲ್ ಖೈದಾ ಸಹ ಸಂಘಟನೆಯಾದ ಜಮಾತ್ ನಸ್ರತ್ ಅಲ್ ಇಸ್ಲಾಂ ವಲ್ ಮುಸ್ಲಿಮಿನ್ (ಜೆಎನ್ಐಎಂ) ಹೊತ್ತಿದೆ.
ಸಚಿವಾಲಯದ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಭಾರತೀಯ ಪ್ರಜೆಗಳ ಸುರಕ್ಷಿತ ಮತ್ತು ಆರಂಭಿಕ ಬಿಡುಗಡೆಗೆ ಅನುಕೂಲವಾಗುವಂತೆ ವಿವಿಧ ಹಂತಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅದು ಹೇಳಲಾಗಿದೆ.
ಮಾಲಿಯಲ್ಲಿ ವಾಸಿಸುತ್ತಿರುವ ಎಲ್ಲಾ ಭಾರತೀಯ ನಾಗರಿಕರು ತೀವ್ರ ಎಚ್ಚರಿಕೆ ವಹಿಸಿ, ಜಾಗರೂಕರಾಗಿರಿ ಮತ್ತು ಅಗತ್ಯ ಸಹಾಯಕ್ಕಾಗಿ ಬಮಾಕೊದಲ್ಲಿರುವ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿರಿ ಎಂದು ಸರ್ಕಾರ ಸೂಚನೆ ನೀಡಿದೆ.

