ಬೆಂಗಳೂರು: ಇತ್ತೀಚೆಗಷ್ಟೇ ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಅರಣ್ಯ ವಲಯದಲ್ಲಿ ಕ್ರಿಮಿನಾಶಕ ಸೇವಿಸಿ 5 ಹುಲಿಗಳು ಸಾವನ್ನಪ್ಪಿರುವ ಪ್ರಕರಣ ಹಸಿಯಾಗಿರುವಾಗಲೇ, ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಮತ್ತೆ ಒಂದು ಹುಲಿ ಹಾಗೂ ಅದರ ಎರಡು ಮರಿಗಳು ಸಾವನ್ನಪ್ಪಿವೆ. ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿದ್ದ ಹಿಮದಾಸ್ ಎಂಬ ಹುಲಿ ಹಾಗೂ ಅದರ ಎರಡು ಮರಿಗಳು ಸಾವನ್ನಪ್ಪಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. ಜು.7ರಂದು ಹಿಮದಾಸ್ ಹುಲಿ ಕಸ ತಿಂದ ಪರಿಣಾಮ ಅನಾರೋಗ್ಯಕ್ಕೆ ತುತ್ತಾಗಿತ್ತು. ತಾಯಿಯ ಹಾಲು ಕುಡಿದಿದ್ದ ಮರಿಗಳು ಕೂಡ ಸಾವನ್ನಪ್ಪಿವೆ.
ಸಾಮಾನ್ಯವಾಗಿ ವಿಷಪೂರಿತ ಕಸ ಸೇವಿಸಿದ ಹುಲಿಯ ಹಾಲನ್ನು ಸೇವನೆ ಮಾಡಿದರೆ ಮರಿ ಹುಲಿಗಳು ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತವೆ. ತಕ್ಷಣವೇ ಈ ಹುಲಿಮರಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ದೇಹದೊಳಗೆ ವಿಷಪೂರಿತ ಕಸ ಸೇರಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ.
ಇದರಲ್ಲಿ ಜು.8ರಂದು ಒಂದು ಹುಲಿ ಜು.9ರಂದು ಮತ್ತೊಂದು ಮರಿ ಹಾಗೂ ಮರುದಿನ ಮತ್ತೊಂದು ಮರಿ ಸಾವನ್ನಪ್ಪಿವೆ. ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಿರುವ ಪಶು ವೈದ್ಯಕೀಯ ತಂಡವು ಸಾವಿಗೆ ಕಾರಣ ಏನೆಂಬುದನ್ನು ಪತ್ತೆ ಮಾಡಿದ್ದಾರೆ. ಒಂದು ಗರ್ಭಕಂಠ ಗಾಯದಿಂದ ಸಾವನ್ನಪ್ಪಿದರೆ, ಮತ್ತೊಂದು ಮರಿ ಮೆದುಳಿನ ಅಂಗಾಂಶ ಊನಗೊಂಡು ಸಾವನ್ನಪ್ಪಿದೆ. ಇನ್ನೊಂದು ಮರಿ ತಾಯಿ ತಲೆಯನ್ನು ಕಚ್ಚಿದ ಪರಿಣಾಮ ಮೆನೆಂಜಿಯಲ್ ಹೆಮಟೋಮದಿಂದ ಸಾವನ್ನಪ್ಪಿದೆ.
ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿರುವ ಇತರ ಹುಲಿ ಮರಿಗಳನ್ನು ರಕ್ಷಣೆ ಮಾಡುವಲ್ಲಿ ಪ್ರಾಣಿಪಾಲಕರು ಮತ್ತು ವೈದ್ಯರ ತಂಡ ಸ್ಥಳದಲ್ಲಿ ಬೀಡುಬಿಟ್ಟಿದೆ.

