1.ಅಮುಲ್ ಮಳಿಗೆ ಸ್ಥಾಪನೆಗೆ ಸಾರ್ವಜನಿಕರಿಂದ ಆಕ್ಷೇಪ
ಬೆಂಗಳೂರಿನ ಹತ್ತು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ಸ್ಥಾಪನೆ ಕುರಿತು ಭಾರಿ ಚರ್ಚೆ ಏರ್ಪಟ್ಟಿದೆ. ನಗರದ ಹತ್ತು ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಮಳಿಗೆ ಸ್ಥಾಪಿಸಲು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ಲಿಮಿಟೆಡ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಕರ್ನಾಟಕದ್ದೇ ಆದ ಕೆಎಂಎಫ್ ನಂದಿನಿ ಇರುವಾಗ ಅಮುಲ್ಗೆ ಏಕೆ ಅವಕಾಶವೆಂದು ಆಕ್ರೋಶ ವ್ಯಕ್ತವಾಗುತ್ತಿದೆ.
2.ಸಿಡಿಲಬ್ಬರದ ಸೆಂಚುರಿಗೆ ವಿಶ್ವ ದಾಖಲೆ ನಿರ್ಮಾಣ
ಮೇಜರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿಯಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅದರಲ್ಲೂ ರೋಹಿತ್ ಶರ್ಮಾ ಅವರ 8 ಶತಕಗಳ ದಾಖಲೆಯನ್ನು ಸರಿಗಟ್ಟಿರುವ ಮ್ಯಾಕ್ಸ್ವೆಲ್, ಇದೀಗ ವಿರಾಟ್ ಕೊಹ್ಲಿ ರೆಕಾರ್ಡ್ ಮುರಿಯುವ ಹೊಸ್ತಿಲಲ್ಲಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಸ್ಫೋಟಕ ಸೆಂಚುರಿ ಸಿಡಿಸುವ ಮೂಲಕ. ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ವಾಷಿಂಗ್ಟನ್ ಫ್ರೀಡಂ ಪರ ಕಣಕ್ಕಿಳಿಯುತ್ತಿರುವ ಮ್ಯಾಕ್ಸ್ವೆಲ್ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ಭರ್ಜರಿ ಶತಕ ಬಾರಿಸಿದ್ದಾರೆ.
3.ವಿಧಾನಸೌಧ ಆವರಣಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಿ
ವಿಧಾನಸೌಧದ ಆವರಣದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೈಕಲ್ ಸವಾರಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಉದ್ಯಮಿ ಮೋಹನ್ದಾಸ್ ಪೈ ಸಾರ್ವಜನಿಕರಿಗೂ ಆಡಳಿತಸೌಧದ ಆವರಣ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾದ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ನಾಗರಿಕರಿಗೆ ವಿಧಾನಸೌಧದ ಆವರಣಕ್ಕೆ ವಾರಾಂತ್ಯಗಳಲ್ಲಿ ಉಚಿತ ಪ್ರವೇಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ
4.ಭೀಕರ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ NSUI ಮುಖಂಡ
ಮಂಗಳೂರಿನ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು NSUI ಮುಖಂಡ ಓಂ ಶ್ರೀ ಹಾಗೂ ಕದ್ರಿ ನಿವಾಸಿ ಅಮನ್ ರಾವ್ ಜೀವ ಕಳೆದುಕೊಂಡಿದ್ದಾರೆ. ಚಾಲಕನ ಅತೀ ವೇಗಕ್ಕೆ Volkswagen ಕಾರು ಪುಡಿಪುಡಿ ಆಗಿದ್ದು ಕಾರಿನಲ್ಲಿದ್ದ ಐವರು ಯುವಕರ ಪೈಕಿ ಇಬ್ಬರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಪ್ರಕರಣ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
5.ಇಡೀ ದೇಶದಲ್ಲೂ ಮುಂಗಾರು ಮಳೆಯ ಆರ್ಭಟ
ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲೂ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಗುಜರಾತ್ನಲ್ಲಿ ಕಳೆದ 24 ಗಂಟೆಯಲ್ಲಿ ಸತತವಾಗಿ ಸುರಿದ ಮಳೆಗೆ 18 ಮಂದಿ ಜೀವ ಕಳೆದುಕೊಂಡಿದ್ದಾರೆ. ಮಳೆಯ ಆರ್ಭಟ ಜೋರಾದ ಹಿನ್ನೆಲೆಯಲ್ಲಿ ರಾಜ್ಯದ 25 ಜಿಲ್ಲೆಗಳಿಗೆ NDRF, SDRF ತಂಡಗಳ ನಿಯೋಜನೆ ಮಾಡಲಾಗಿದೆ. ಬೋಟಡ್ ಜಿಲ್ಲೆಯಲ್ಲಿ ಕಮದಾಡ್ ಡ್ಯಾಂ ಗೇಟ್ ತೆರೆದು ನೀರನ್ನು ಹೊರ ಬಿಡಲಾಗಿದೆ. ಡ್ಯಾಂ ತುಂಬಿದ್ದರಿಂದ ಅಧಿಕಾರಿಗಳು ಮುಂಜಾಗೃತ ಕ್ರಮವಾಗಿ ಗೇಟ್ ತೆರೆದಿದ್ದಾರೆ.
6.ಬಿಗ್ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ಆರೋಪ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಕೇಬಲ್ ಚಾನೆಲ್ ಸೆಟ್ ಅಪ್ ಮಾಡಿ ಕೊಡೋದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬುವವರು ಆರೋಪ ಮಾಡಿದ್ದಾರೆ. ನಾಲ್ಕು ಲಕ್ಷ ಹಣ ಹಿಂದಿರುಗಿಸಲು ಯಾಮಾರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
7.ಹೈಕೋರ್ಟ್ ಆದೇಶವೇ ಶಾಕಿಂಗ್ ಎಂದ ಸುಪ್ರೀಂ ಕೋರ್ಟ್
ತಮಿಳುನಾಡು ಎಡಿಜಿಪಿ ಜಯರಾಂ ಬಂಧನ ಪ್ರಕರಣವು ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ಎಡಿಜಿಪಿ ಬಂಧನಕ್ಕೆ ಸೂಚಿಸಿರುವುದೇ ಶಾಕಿಂಗ್ ಆದೇಶ ಅಂತಾ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.ತಮ್ಮ ಬಂಧನಕ್ಕೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಎಡಿಜಿಪಿ ಜಯರಾಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
8.ಭಾರವಾದ ಹೃದಯದಿಂದ ತಮ್ಮನ ಅಂತ್ಯಕ್ರಿಯೆ ನೆರವೇರಿಸಿದ ವ್ಯಕ್ತಿ
ಗುಜರಾತ್ನ ಅಹಮದಾಬಾದ್ನಲ್ಲಿ ಇತ್ತೀಚೆಗೆ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಬದುಕುಳಿದಿದ್ದ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರ ಸಹೋದರನ ಅಂತ್ಯಸಂಸ್ಕಾರ ನೆರವೇರಿಸಬೇಕಿರುವ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
9.ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ
ಐಸಿಐಸಿಐ ಬ್ಯಾಂಕ್ ತನ್ನ ಕೆಲ ಹಣಕಾಸು ಸೇವೆಗಳಿಗೆ ಶುಲ್ಕಗಳನ್ನು ಪರಿಷ್ಕರಿಸಿದೆ. ಎಟಿಎಂ ಟ್ರಾನ್ಸಾಕ್ಷನ್, ಡಿಮ್ಯಾಂಡ್ ಡ್ರಾಫ್ಟ್, ಕ್ಯಾಷ್ ಡೆಪಾಸಿಟ್, ಡೆಬಿಟ್ ಕಾರ್ಡ್ ಇತ್ಯಾದಿಗಳಿಗೆ ಶುಲ್ಕಗಳನ್ನು ಪರಿಷ್ಕರಿಸಿದೆ. 2025ರ ಜುಲೈ 1ರಿಂದ ಈ ಹೊಸ ಶುಲ್ಕಗಳು ಜಾರಿಗೆ ಬರಲಿವೆ. ನೀವು ಬ್ಯಾಂಕ್ ಬ್ರ್ಯಾಂಚ್ಗೆ ಹೋಗಿ ಪದೇ ಪದೇ ಕ್ಯಾಷ್ ವಿತ್ಡ್ರಾ ಮಾಡಿದರೆ ಶುಲ್ಕ ಕಟ್ಟಬೇಕಾದೀತು. ಬೇರೆ ಬ್ಯಾಂಕುಗಳಲ್ಲೂ ಕೂಡ ಈ ಎಲ್ಲಾ ಸೇವೆಗಳಿಗೆ ಶುಲ್ಕ ಇರುತ್ತದೆ.
10.ಹೆದ್ದಾರಿ ಟೋಲ್ ಕಟ್ಟಿ ಬೇಸತ್ತಿದ್ದವರಿಗೆ ಬಿಗ್ ರಿಲೀಫ್
ದೇಶದಲ್ಲಿ ಹೆದ್ದಾರಿ ಟೋಲ್ ಕಟ್ಟಿ ಬೇಸತ್ತಿದ್ದವರಿಗೆ ಕೇಂದ್ರ ಸರ್ಕಾರ ಬಿಗ್ ರೀಲೀಫ್ ನೀಡಿದೆ. ಫಾಸ್ಟ್ ಟ್ಯಾಗ್ ಆಧರಿತ ವಾರ್ಷಿಕ ಪಾಸ್ ಜಾರಿಗೆ ತರಲು ಕೇಂದ್ರ ಸರ್ಕಾರದ ನಿರ್ಧಾರ ಮಾಡಿದ್ದು, ಆಗಸ್ಟ್ 15, 2025 ರಿಂದ ವಾರ್ಷಿಕ ಟೋಲ್ ಪಾಸ್ ನೀಡಲಾಗುತ್ತದೆ. ವಾರ್ಷಿಕ 3 ಸಾವಿರ ರೂಪಾಯಿಗೆ ಟೋಲ್ ಪಾಸ್ ಪಡೆದು ಒಂದು ವರ್ಷಗಳ ಕಾಲ ರಾಷ್ಟ್ರ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮಾಡಬಹುದಾಗಿದೆ ಎಂದು ಕೇಂದ್ರದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ.