ಬೆಂಗಳೂರು : ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಸರಿಗೆ ನೌಕರರು ಮುಂಜಾನೆಯಿಂದಲೇ ಮುಷ್ಕರ ಆರಂಭಿಸಿದ್ದು, ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ಬಸ್ ಗಳು ರಸ್ತೆಗಿಳಿದಿಲ್ಲ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿಯೂ ಕೆ.ಎಸ್.ಆರ್.ಟಿ.ಸಿ ನೌಕರರು ಕೆಲಸಕ್ಕೆ ಗೈರಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲಾ ಬಸ್ ಗಳು ಬಸ್ ನಿಲ್ದಾಣ, ಡಿಪೋಗಳಲ್ಲಿ ನಿಂತಲ್ಲೇ ನಿಂತಿವೆ.
ಸರ್ಕಾರಿ ಬಸ್ ಗಳಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದು, ಖಾಸಗಿ ಬಸ್ ಗಳ ಖಾರುಬಾರು ಜೋರಾಗಿದೆ. ರಾಜ್ಯ ಸರ್ಕಾರ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ನಿಟ್ಟಿನಲ್ಲಿ ಖಾಸಗಿ ಬಸ್ ಗಳ ಸೇವೆ ಕಲ್ಪಿಸಿದೆ. ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಸೂಚಿಸಲಾಗಿದೆ.
ಸಾರಿಗೆ ನೌಕರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಭೆ ವಿಫಲವಾಗಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ.
ಪ್ರಯಾಣಿಕರ ಪರದಾಟ :
ಬೆಂಗಳೂರಿನ ಮೆಜೆಸ್ಟಿಕ್ ಹಾಗೂ ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಬಸ್ಗಳಿಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಡಿಪೋಗಳಲ್ಲೇ ಬಹುತೇಕ ಬಸ್ಗಳು ಠಿಕಾಣಿ ಹೂಡಿವೆ. ಬೆಳಗಿನ ಜಾವ ಬಸ್ ಸೇವೆ ಇತ್ತು. ಆದರೆ, 7 ಗಂಟೆಯ ನಂತರ ಯಾವುದೇ ಬಸ್ ಸೇವೆಗಳು ನಗರದಲ್ಲಿ ಇಲ್ಲ.
ಇದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಅಲ್ಲದೆ, ಕಚೇರಿಗೆ ತೆರಳಲು ಸಹ ಕಷ್ಟವಾಗುತ್ತಿದೆ. ಬೆಂಗಳೂರು ಮಾತ್ರವಲ್ಲದೆ, ಮೈಸೂರು, ಹಾಸನ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಚಾಮರಾಜನಗರ, ಬೀದರ್ ಹಾಗೂ ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಹುತೇಕ ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇದರಿಂದ ಜನ ಸಾಮಾನ್ಯರಿಗೆ ಸಾಕಷ್ಟು ತೊಂದರೆ ಎದುರಾಗಿದೆ. ಎಸ್ಮಾ ಜಾರಿ, ಕೋರ್ಟ್ ಆದೇಶ ಹಾಗೂ ಅಮಾನತ್ತಿನ ಆದೇಶವಿದ್ದರೂ ಬಹುತೇಕ ಮಂದಿ ಕೆಲಸಕ್ಕೆ ಹಾಜರಾಗದೇ, ಮುಷ್ಕರದಲ್ಲಿ ತೊಡಗಿದ್ದಾರೆ.
ಬಳ್ಳಾರಿಯಲ್ಲಿ ಬಹುತೇಕ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ದೂರದ ಊರಿಂದ ಬಂದ ಬಸ್ಗಳು ನಿಲ್ದಾಣದಲ್ಲಿ ಉಳಿದಿವೆ. ಬೆಳಗ್ಗೆಯಿಂದಲೂ ಡಿಪೋದಿಂದ ಯಾವುದೇ ಬಸ್ಗಳು ಸಂಚರಿಸಿಲ್ಲ. ಸಾರಿಗೆ ಸೌಕರರು ಬಸ್ ನಿಲ್ದಾಣದತ್ತ ಬರುತ್ತಿಲ್ಲ. ಸಂಘಟಕರು ಕೂಡ ನಿಲ್ದಾಣದ ಬಳಿ ಬಂದಿಲ್ಲ. ಕೇವಲ ಆಂಧ್ರ ಬಸ್ಗಳು ಮತ್ತು ಖಾಸಗಿ ಬಸ್ಗಳು ಓಡಾಡುತ್ತಿವೆ.
ದುಪ್ಪಟ್ಟಾದ ಆಟೋ ರೇಟ್
ಬಸ್ ಮುಷ್ಕರ ಪ್ರಯುಕ್ತ ಜನರು ಅನಿವಾರ್ಯ ಕಾರಣ ಖಾಸಗಿ ವಾಹನಗಳ ಮೊರೆ ಹೋದರೆ, ವಾಹನಗಳ ಸೌಲಭ್ಯ ಪಡೆಯಲು ಆಗದ ಕೆಲವರು ಆಟೋಗಳ ಮೊರೆ ಹೋದರು. ಆದರೆ, ನಿತ್ಯವೂ ಒಂದಿದ್ದ ಆಟೋ ದರ ಮುಷ್ಕರ ಹಿನ್ನಲೆ ದುಪ್ಪಟ್ಟಾಗಿತ್ತು. 20 ರು. ಜಾಗದಲ್ಲಿ 200 ರು. 50 ಜಾಗದಲ್ಲಿ 500 ರು. ದರ ನಿಗದಿ ಮಾಡಿದ ಆಟೋ ಚಾಲಕರು ಮುಷ್ಕರದ ದುರುಪಯೋಗ ಮಾಡಿಕೊಂಡ ಘಟನೆ ಸಹ ನಡೆಯಿತು. ಬಸ್ ಸೇವೆ ಇಲ್ಲದೇ, ವಾಹನಗಳ ಸೌಲಭ್ಯ ಪಡೆಯಲು ಆಗದೆ, ಆಟೋಗಳಿಗೆ ದುಪ್ಪಟು ಹಣ ನೀಡುವ ಪರಿಸ್ಥಿತಿಯಿಂದಾಗಿ ಶ್ರೀ ಸಾಮಾನ್ಯ ಪರದಾಡಿದರು.
ಖಾಸಗಿ ವಾಹನಗಳ ಮೊರೆ
ಕೆ ಎಸ್ ಆರ್ ಟಿ ಸಿ ನೌಕರರ ಮುಷ್ಕರ ಹಿನ್ನಲೆ ಕಲಬುರಗಿಯ ಯಾವ ಬೀದಿಯಲ್ಲೂ ಬಸ್ ಗಳ ಸಂಚಾರದ ಲಕ್ಷಣ ಕಾಣದೇ ಇರುವುದರಿಂದ ಬೇರೆ ಜಿಲ್ಲೆ, ಊರುಗಳಲ್ಲಿ ಸರಕಾರಿ ನೌಕರಿ ಮಾಡುವ ನೌಕರರೆಲ್ಲ ಸೇರಿ ಖಾಸಗಿ ವಾಹನಗಳ ಮೊರೆ ಹೋದರು. ನಾಲ್ಕೈದು ಜನರು ಸೇರಿ ಒಂದು ಖಾಸಗಿ ವಾಹನ ಬುಕ್ ಮಾಡಿ ತಮ್ಮ ಕೆಲಸಗಳಿಗೆ ತೆರಳಿದ ಪ್ರಸಂಗ ಸಹ ನಡೆದಿದೆ. ಇನ್ನು ಕೆಲ ಸಾರ್ವಜನಿಕರು ಕೂಡ ಬಸ್ ಗಾಗಿ ಕಾಯದೆ, ಖಾಸಗಿ ವಾಹನ, ಪರಿಚಿತರ ವಾಹನ, ಸ್ವಂತ ವಾಹನಗಳಲ್ಲಿ ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಮುಂದಾದರು.

