ತುಮಕೂರು: ತುಮಕೂರು – ಬೆಂಗಳೂರು ನಡುವೆ ಹೊಸ ಮೆಮು ರೈಲು ಸಂಚಾರಕ್ಕೆ ಸೆಪ್ಟೆಂಬರ್ 27ರಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತುಮಕೂರಲ್ಲಿ ಹಸಿರು ನಿಶಾನೆ ತೋರಲಿದ್ದಾರೆಂದು ರೈಲ್ವೆ ಪ್ರಯಾಣಿಕರ ವೇದಿಕೆಯ ಕಾರ್ಯದರ್ಶಿ ಕರಣಂ ರಮೇಶ್ ತಿಳಿಸಿದ್ದಾರೆ.
ಬಾನುವಾರ ಹೊರತುಪಡಿಸಿ ಎಲ್ಲ ದಿನಗಳಂದು ಈ ರೈಲು ಸಂಚರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ. ರೈಲ್ವೆ ಪ್ರಯಾಣಿಕರ ವೇದಿಕೆಯ ಸತತ ಬೇಡಿಕೆಗಳಿಗೆ ಸ್ಪಂದಿಸಿರುವ ಸಚಿವ ವಿ ಸೋಮಣ್ಣ, ಕೇಂದ್ರ ಸರಕಾರದಿಂದ ಹೊಸ ರೈಲುಗಳ ಸಂಚಾರಕ್ಕೆ ಅನುಮೋದನೆ ಪಡೆದುಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಪ್ರತಿಷ್ಟಿತ ವಂದೇ ಭಾರತ್ ರೈಲಿಗೆ ತುಮಕೂರಲ್ಲಿ ನಿಲುಗಡೆ ಕಲ್ಪಿಸಿಕೊಟಿದ್ದು, ಈಗ ತುಮಕೂರು ಜಿಲ್ಲೆಯ ರೈಲು ಪ್ರಯಾಣಿಕರಿಗೆ ಮತ್ತೊಂದು ಮಹತ್ತರ ಕೊಡುಗೆ ನೀಡಿದ್ದಾರೆ.
ತುಮಕೂರು – ಯಶವಂತಪುರ ರೈಲು ನಿಲ್ದಾಣಗಳ ನಡುವೆ ಆರಂಭಿಸಲಿದ್ದು, ಭಾನುವಾರ ಹೊರತುಪಡಿಸಿ ಪ್ರತಿದಿನ ತುಮಕೂರಿನಿಂದ ಬೆಳಗ್ಗೆ 8.45ಕ್ಕೆ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ. ಸಂಜೆ 5.40ಕ್ಕೆ ಯಶವಂತಪುರದಿಂದ ಹೊರಟು 7.05 ಕ್ಕೆ ತುಮಕೂರು ತಲುಪಲಿದೆ. ಈ ರೈಲು ಸಂಚಾರದಿಂದ ಸಂಜೆ ವೇಳೆ ಅರಸೀಕೆರೆ ಪ್ಯಾಸೆಂಜರ್ಗಿಂತ ಮುಂಚೆ ಇನ್ನೊಂದು ರೈಲು ಸಂಚಾರ ಆರಂಭಿಸಬೇಕೆಂಬ ಪ್ರಯಾಣಿಕರ ಮನವಿಗೆ ಸಚಿವ ಸೋಮಣ್ಣ ಅವರು ಸ್ಪಂದಿಸಿ ಅನುಕೂಲ ಕಲ್ಪಿಸಿದ್ದಾರೆ.
ಈ ರೈಲು ತುಮಕೂರು ಯಶವಂತಪುರ ಮಧ್ಯೆ ಬರುವ ಎಲ್ಲ ನಿಲ್ದಾಣಗಳಲ್ಲೂ ನಿಲ್ಲಲಿದೆ. ಕೇಂದ್ರ ಸಚಿವರಾಗಿ ಅಕಾರ ವಹಿಸಿಕೊಂಡಾಗಿನಿಂದ ಹಂತ ಹಂತವಾಗಿ ತುಮಕೂರು ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ಸಚಿವರು ವಿಶೇಷವಾಗಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿರುವುದಕ್ಕೆ ವೇದಿಕೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆಮು ರೈಲಿನ ವಿಚಾರವಾಗಿ ಸೆಪ್ಟೆಂಬರ್ 14ರಂದು ಮೈಸೂರಿನಲ್ಲಿ ಮಾತನಾಡಿದ್ದ ಸಚಿವ ವಿ ಸೋಮಣ್ಣ ಅವರು ತುಮಕೂರು, ಮೈಸೂರು ಮತ್ತು ಬೆಂಗಳೂರು ಕಡೆಗೆ ಮೂರು ಹೊಸ ಮೆಮು ರೈಲು ಸೇವೆ ಆರಂಭಿಸಲಾಗುವುದು. ಸೆಪ್ಟೆಂಬರ್ 27ರಂದು ಪ್ರಥಮವಾಗಿ ತುಮಕೂರು – ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲಿಗೆ ಚಾಲನೆ ನೀಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದರು. ಈಗ ಅದರ ಸಮಯ ಕೂಡ ನಿಗದಿ ಆಗಿದೆ.

