ಸೇಲಂ : ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಉಕ್ಕು ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಉಕ್ಕು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗಾಗಲೇ ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ವೈಝಾಗ್ ಉಕ್ಕು ಕಾರ್ಖಾನೆ, ಛತ್ತೀಸಗಢದ ನಗರ್ ನಾರ್ ನಲ್ಲಿರುವ ಎನ್ ಎಂಡಿಸಿ ಉಕ್ಕು ಕಾರ್ಖಾನೆ, ಬಿಲಾಯ್ ಉಕ್ಕು ಕಾರ್ಖಾನೆಗೆ ಭೇಟಿ ಕೊಟ್ಟಿದ್ದರ ಭಾಗವಾಗಿ ಕೇಂದ್ರ ಸಚಿವರು ಸೋಮವಾರ ಸೇಲಂ ಉಕ್ಕು ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷ ಅಮರೆಂದು ಪ್ರಕಾಶ್ ಸೇರಿದಂತೆ ಉಕ್ಕು ಸಚಿವಾಲಯದ ಉನ್ನತ ಅಧಿಕಾರಿಗಳ ಜತೆ ಉಕ್ಕು ಸ್ಥಾವರದ ಭೇಟಿಗೆ ಬಂದ ಸಚಿವರಿಗೆ ಕಾರ್ಖಾನೆಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಚಂದ್ರ ಪಾಂಡೆ ಅವರು ಕಾರ್ಖಾನೆಯ ಕಾರ್ಯ ಚಟುವಟಿಕೆ, ಉಕ್ಕು ಉತ್ಪಾದನೆ ಇನ್ನಿತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಸೇಲಂ ಕಾರ್ಖಾನೆಯು ಸ್ಟೇನ್ಲೆಸ್ ಸ್ಟೀಲ್ ರೋಲ್ ಗಳನ್ನು ತಯಾರು ಮಾಡುವುದರಲ್ಲಿ ಪ್ರಖ್ಯಾತಿ ಆಗಿದ್ದು, ಈ ಸಂದರ್ಭದಲ್ಲಿ ಸಚಿವರು ರೋಲ್ ಗಳ ತಯಾರಿಕೆ ಪ್ರಕ್ರಿಯೆಯನ್ನು ಖುದ್ದು ವೀಕ್ಷಿಸಿದರು. ಅಲ್ಲದೆ; ನಟ್ಟು ಬೋಲ್ಟ್, ನಾಣ್ಯಗಳನ್ನು ತಯಾರಿಸುವ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಅಧಿಕಾರಿಗಳ ಜತೆ ಸಮಾಲೋಚನೆ
ಕಾರ್ಖಾನೆಯ ವೀಕ್ಷಣೆ ನಂತರ ಕೇಂದ್ರ ಸಚಿವರು ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದರು. ಪ್ರಾತ್ಯಕ್ಷಿಕೆಯ ಮೂಲಕ ಇಡೀ ಕಾರ್ಖಾನೆಯ ಮಾಹಿತಿಯನ್ನು ಪಡೆದುಕೊಂಡ ಸಚಿವರು, ಅಲ್ಲಿನ ಸಮಸ್ಯೆ ಸವಾಲುಗಳ ಬಗ್ಗೆಯೂ ಸವಿಸ್ತಾರವಾಗಿ ಚರ್ಚೆ ನಡೆಸಿದರು. ಉತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು; ಪ್ರಧಾನಿಗಳು ನಿಗದಿ ಮಾಡಿರುವ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆಯ ಗುರಿಯ ಬಗ್ಗೆ ವಿವರಿಸಿದರು.
ವಿಕಸಿತ ಭಾರತ್ 2047ರ ಭಾಗವಾಗಿ ಪ್ರಧಾನಿಗಳು ನಿಗದಿ ಮಾಡಿರುವ ಗುರಿ ತಲುಪುವ ನಿಟ್ಟಿನಲ್ಲಿ ಎಲ್ಲರೂ ಬದ್ಧತೆಯಿಂದ ಕೆಲಸ ಮಾಡಬೇಕು ಹಾಗೂ ಕಾರ್ಖಾನೆಗೆ ಅಗತ್ಯ ಇರುವ ಎಲ್ಲ ಶಕ್ತಿಯನ್ನು ತುಂಬಲಾಗುವುದು ಎಂದು ಸಚಿವರು ಭರವಸೆ ನೀಡಿದರು.

