ಕಾಸಗಂಜ್ (ಉತ್ತರ ಪ್ರದೇಶ), ಫೆಬ್ರವರಿ 22: ಉತ್ತರ ಪ್ರದೇಶ ರಾಜ್ಯದ ಕಾಸಗಂಜ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐವರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಅಮಾಪುರದ ಕೋಟ್ವಾಲಿ ವ್ಯಾಪ್ತಿಯ ಏಟಾ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪದ ಮನೆಯಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಸತ್ಯವೀರ್ ಅಲಿಯಾಸ್ ಶ್ಯಾಮವೀರ್ ‘ಫೌಜಿ’ (50), ಅವರ ಪತ್ನಿ ರಾಮಶ್ರೀ (48), ಪುತ್ರಿಯರಾದ ಪ್ರಾಚಿ (12) ಮತ್ತು ಅಮರವತಿ (10), ಹಾಗೂ ಪುತ್ರ ಗಿರೀಶ್ (9) ಎಂದು ಗುರುತಿಸಲಾಗಿದೆ. ಐವರ ಸಾವಿನ ಬಗ್ಗೆ ಸ್ಥಳೀಯರು ಸಾಮೂಹಿಕ ಆತ್ಮಹತ್ಯೆಯ ಶಂಕೆ ವ್ಯಕ್ತಪಡಿಸಿದರೂ, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಸತ್ಯವೀರ್ ವೃತ್ತಿಯಲ್ಲಿ ವೆಲ್ಡರ್ ಆಗಿದ್ದು, ಕಳೆದ 2-3 ದಿನಗಳಿಂದ ಕುಟುಂಬದವರು ಮನೆಯಿಂದ ಹೊರಗೆ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆ ಬಾಗಿಲು ಒಳಗಿನಿಂದ ಬೀಗ ಹಾಕಲ್ಪಟ್ಟಿರುವುದು ಗಮನಕ್ಕೆ ಬಂದಿದ್ದು, ಬಾಗಿಲು ಒಡೆದು ಒಳ ಪ್ರವೇಶಿಸಿದಾಗ ಸತ್ಯವೀರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಪತ್ನಿ ಮತ್ತು ಮೂವರು ಮಕ್ಕಳು ಹಾಸಿಗೆಯ ಮೇಲೆ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.
ಘಟನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಕಿತಾ ಶರ್ಮಾ ಪ್ರತಿಕ್ರಿಯಿಸಿ, ಕುಟುಂಬವು 2-3 ದಿನಗಳಿಂದ ಹೊರಗೆ ಕಾಣಿಸದಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಆಧರಿಸಿ ಹೇಳುವುದಾದರೆ, ಕುಟುಂಬದ ಉಳಿದ ಸದಸ್ಯರನ್ನು ಹತ್ಯೆ ಮಾಡಿ ಬಳಿಕ ಸತ್ಯವೀರ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇರುವುದಾಗಿ ಶಂಕಿಸಲಾಗಿದೆ. ಆದರೆ, ಪ್ರಕರಣದ ನಿಜಸ್ವರೂಪ ತಿಳಿಯಲು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಫಾರೆನ್ಸಿಕ್ ತಂಡ ಹಾಗೂ ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪೊಲೀಸರು ಪಂಚನಾಮೆ ಕಾರ್ಯವಿಧಾನ ಪೂರ್ಣಗೊಳಿಸಿ, ಶವಗಳನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಆರ್ಥಿಕ ಸಂಕಷ್ಟವೇ ಈ ದುರ್ಘಟನೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗುತ್ತಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

