ತುಮಕೂರು, ಫೆ.17: ವಿ.ಸೋಮಣ್ಣ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ತೀವ್ರ ತಿರುಗೇಟು ನೀಡಿದ್ದಾರೆ. ಆರ್ಎಸ್ಎಸ್ ನೋಂದಣಿಯಾಗದೇ ಅಕ್ರಮ ಹಣ ಸಂಗ್ರಹದಲ್ಲಿ ತೊಡಗಿದೆ ಎಂಬ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ಖರ್ಗೆ ಅವರು ಮೊದಲು ತಮ್ಮ ಮಾತಿನ ಗಂಭೀರತೆಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅನೇಕ ನಾಯಕರ ಕೊಡುಗೆ ಅಪಾರವಾಗಿದೆ. ಅದರ ಇತಿಹಾಸವನ್ನು ತಿಳಿಯದೇ ಮಾತನಾಡುವುದು ಬಾಲಿಶತನ ಎಂದು ಅವರು ಆಕ್ಷೇಪಿಸಿದರು. “ಆರ್ಎಸ್ಎಸ್ ಇರಲಿಲ್ಲ ಅಂದರೆ ನೀವು ಇರ್ತಿರಲಿಲ್ಲ, ನಿಮ್ಮ ಕುಟುಂಬವೂ ಇರ್ತಿರಲಿಲ್ಲ. ಇತಿಹಾಸ ತಿಳಿದುಕೊಂಡು ಮಾತನಾಡಿ” ಎಂದು ಕಿಡಿಕಾರಿದರು.
ರಾಜ್ಯದ ಮಂತ್ರಿಯಾಗಿ ಜನರನ್ನು ಗೊಂದಲಕ್ಕೆ ದೂಡುವುದು ಗೌರವ ತರುವುದಿಲ್ಲ. ಇಂತಹ ಹೇಳಿಕೆ ನೀಡುವ ಮುನ್ನ ತಮ್ಮ ಕುಟುಂಬದ ಇತಿಹಾಸ ಹಾಗೂ ನಡೆದು ಬಂದ ದಾರಿ ತಿಳಿದುಕೊಳ್ಳಬೇಕು ಎಂದು ಸೋಮಣ್ಣ ಸಲಹೆ ನೀಡಿದರು.
ಶಾಸಕರ ವಿದೇಶ ಪ್ರವಾಸ ವಿಚಾರ
ಶಾಸಕರ ವಿದೇಶ ಪ್ರವಾಸದ ವಿಚಾರದಲ್ಲೂ ಅವರು ಸರ್ಕಾರವನ್ನು ಟೀಕಿಸಿದರು. “ರಾಜ್ಯದಲ್ಲಿ ಆಡಳಿತ ಕುಸಿದು ಹೋಗಿದೆ. ಸರ್ಕಾರ ನಿರ್ಜೀವವಾಗಿದೆ. ಆ ನಿರ್ಲಿಪ್ತತೆಯನ್ನು ಮುಚ್ಚಿಕೊಳ್ಳಲು ಇಂತಹ ವಿಷಯಗಳನ್ನು ಮುಂದಿಟ್ಟಿದ್ದಾರೆ” ಎಂದು ಆರೋಪಿಸಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಮೂರು ವರ್ಷ ಕಳೆಯುತ್ತಾ ಬರುತ್ತಿರುವ ಸರ್ಕಾರ, ಜನರನ್ನು ಬೇರೆ ದಾರಿಗೆ ಕೊಂಡೊಯ್ಯಲು ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದೆ. “ಇವರೆಲ್ಲರಿಗೂ ಡಾಕ್ಟರೇಟ್ ಕೊಡಬೇಕು ಅನಿಸುತ್ತದೆ” ಎಂದು ವ್ಯಂಗ್ಯವಾಡಿದರು.
ಜನರ ಸಂಕಷ್ಟವನ್ನು ಅರ್ಥಮಾಡಿಕೊಳ್ಳದೇ ನಡೆದುಕೊಳ್ಳುವ ನಡವಳಿಕೆಯನ್ನು ಇನ್ಮುಂದೆ ಬಿಡಬೇಕು ಎಂದು ಅವರು ಆಗ್ರಹಿಸಿದರು. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

