ಭಾಲ್ಕಿ (ಬೀದರ್), ಜ.17: ಬೀದರ್: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ, ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆಯವರ ತಂದೆ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರು ವಯೋಸಹಜ ಅನಾರೋಗ್ಯದಿಂದ ಬೀದರ್ನ ನಿನ್ನೆ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ,
ವಯೋ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಮಲ್ಸಿ ಸ್ಪೆಷಾಲಿಟಿ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಕೆಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರನ್ನು ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡಲಾಗುತ್ತಿತ್ತು. ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 102 ವರ್ಷ ವಯಸ್ಸಾಗಿತ್ತು.
ಶುಕ್ರವಾರ ರಾತ್ರಿ ಲಿಂಗೈಕ್ಯರಾದ ಸ್ವಾತಂತ್ರ್ಯ ಸೇನಾನಿ, ಏಕೀಕರಣದ ನೇತಾರ, ಕನ್ನಡ ಪ್ರೇಮಿ ಹಾಗೂ ಮಾಜಿ ಸಚಿವರಾದ ಭೀಮಣ್ಣ ಖಂಡ್ರೆ ಅವರ ನಿಧನದಿಂದಾಗಿ ಅವರ ಕರ್ಮಭೂಮಿ ಭಾಲ್ಕಿಯಲ್ಲಿ ಇಂದು ನೀರವ ಮೌನ ಆವರಿಸಿತು.
ತಮ್ಮ ಕ್ಷೇತ್ರ ಭಾಲ್ಕಿ ಹಾಗೂ ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿ, ರೈತರ ಕಲ್ಯಾಣ ಮತ್ತು ಬಡವರ ಉದ್ದಾರಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಕರ್ಮಯೋಗಿ ಭೀಮಣ್ಣ ಖಂಡ್ರೆ ಅವರ ಅಂತಿಮ ದರ್ಶನಕ್ಕಾಗಿ ಸಹಸ್ರಾರು ಜನರು ತಂಡೋಪ ತಂಡವಾಗಿ ಆಗಮಿಸಿ ಅಂತಿಮ ನಮನ ಸಲ್ಲಿಸಿ ಅಶ್ರುತರ್ಪಣ ಮಾಡಿದರು.
ಭಾಲ್ಕಿಯ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ-ಮಳಿಗೆಗಳನ್ನು ಮುಚ್ಚಿ, ತಮ್ಮ ಕ್ಷೇತ್ರದ ಪ್ರಗತಿಗಾಗಿ ಹಗಲಿರುಳು ದುಡಿದ ಮೇರು ನಾಯಕನಿಗೆ ಗೌರವ ಸಲ್ಲಿಸಿದರು.
ಇಂದು ಬೆಳಗ್ಗೆ ಗಾಂಧಿಗಂಜ್ನ ಖಂಡ್ರೆ ನಿವಾಸದಲ್ಲಿ ಭಾಲ್ಕಿ ಹಿರೇಮಠದ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಗುರುಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಕುಟುಂಬದ ಸದಸ್ಯರು ಪಾರ್ಥಿವ ಶರೀರಕ್ಕೆ ಮಹಾರತಿ ಬೆಳಗಿಸಿದರು. ಪವಿತ್ರ ಆತ್ಮವಿದ್ದ ದೇಹದ ಶುದ್ಧಿಗಾಗಿ ಜಳಕ ಮಾಡಿಸಿ, ಲಿಂಗಪೂಜೆ ನೆರವೇರಿಸಿ, ಭಸ್ಮಧಾರಣೆ, ರುದ್ರಾಕ್ಷಿ ಮಾಲೆ ತೊಡಿಸಿ, ಧೂಪ-ದೀಪಾರತಿ ಹಾಗೂ ಪಾದಪೂಜೆ ನಡೆಸಲಾಯಿತು.
ಪುತ್ರರಾದ ಈಶ್ವರ ಬಿ. ಖಂಡ್ರೆ, ಅಮರಕುಮಾರ್ ಖಂಡ್ರೆ, ಪುತ್ರಿಯರಾದ ಶಕುಂತಲಾ, ನಾಗಮ್ಮ, ಡಾ. ಆಶಾ, ಡಾ. ಶೋಭಾ, ಭಾರತಿ ಹಾಗೂ ಮೊಮ್ಮಕ್ಕಳಾದ ಡಾ. ಗುರುಪ್ರಸಾದ್ ಖಂಡ್ರೆ, ಸಂಸದ ಸಾಗರ್ ಖಂಡ್ರೆ ಸೇರಿದಂತೆ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿ ಆರತಿ ನೆರವೇರಿಸಿದರು. ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

