ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನಿಂದ ಭಾರತೀಯರಿಗೆ ಆಘಾತಕಾರಿ ಸುದ್ದಿ ಬಂದಿದೆ. ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆ ಹುಟ್ಟಿಸಿದ್ದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ರನ್ನು ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆ ಒಲಿಂಪಿಕ್ಸ್ ನಿಂದ ಅನರ್ಹಗೊಳಿಸಿದೆ.
ವಿನೇಶ್ ಫೋಗಟ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸ್ಪರ್ಧಿಯಾಗಿದ್ದರು. ಎರಡನೇ ದಿನದ ಆಟಕ್ಕೆ ಪೂರ್ವಭಾವಿಯಾಗಿ ಇಂದು ಬೆಳಿಗ್ಗೆ ದೇಹ ತೂಕ ಅಳತೆ ಮಾಡಿದಾಗ ಅರ್ಹತಾ ಮಾನದಂಡಕ್ಕಿಂತಲೂ 150 ಗ್ರಾಂ ಹೆಚ್ಚುವರಿಯಾಗಿರುವುದು ಕಂಡುಬಂದಿದೆ.
ಕೂಡಲೇ ಅಂತಾರಾಷ್ಟ್ರೀಯ ಕುಸ್ತಿ ಸಂಸ್ಥೆಯ ನಿಯಮಾವಳಿ ಪ್ರಕಾರ ವಿನೇಶ್ ಫೋಗಟ್ರನ್ನು ಒಲಿಂಪಿಕ್ಸ್ ಕ್ರೀಡಾಕೂಟದಿಂದ ಅನರ್ಹಗೊಳಿಸಲಾಗಿದೆ.
ನಿನ್ನೆ ಮೂರು ಪಂದ್ಯಗಳಲ್ಲಿ ಭರ್ಜರಿ ದಿಗ್ವಿಜಯ ಸಾಧಿಸಿ, ಫೈನಲ್ ಪ್ರವೇಶಿಸಿದ ಪೋಗಟ್ ಇಂದು ರಾತ್ರಿ ಪ್ಯಾರಿಸ್ನಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಅಮೆರಿಕದ ಹಿಲ್ಡೆಬ್ರಾಂಡ್ಟ್ ಸಾರಾ ಆನ್ ರೊಂದಿಗೆ ಪೈಪೋಟಿ ನಡೆಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಲು ದಾಂಗುಡಿ ಇಟ್ಟಿದ್ದರು.
ಆದರೆ ಕೋಟ್ಯಂತರ ಭಾರತೀಯರ ನಿರೀಕ್ಷೆಗಳು ತಲೆಕೆಳಗಾಗಿದ್ದು, ಫೋಗಟ್ರ ದೇಹತೂಕ 150 ಗ್ರಾಂ ಹೆಚ್ಚಾಗಿರುವುದರಿಂದ ಒಲಿಂಪಿಕ್್ಸ ಪಂದ್ಯಾವಳಿಯಿಂದ ಅನರ್ಹಗೊಂಡು ಸ್ಪರ್ಧೆಯಿಂದ ಹೊರಗುಳಿಯಬೇಕಾಗಿದೆ.
ಭಾರತದ ಇತಿಹಾಸದಲ್ಲಿ ಒಲಿಂಪಿಕ್ಸ್ ನಲ್ಲಿ ಭಾರತದ ಮಹಿಳಾ ಕುಸ್ತಿಪಟುಗಳು ಫೈನಲ್ ತಲುಪಿರಲಿಲ್ಲ. ಆ ಸಾಧನೆ ಮಾಡಿದ್ದ ಫೋಗಟ್ ಪದಕಗಳಿಲ್ಲದೆ ಬರಿಗೈನಲ್ಲಿ ನಿರ್ಗಮಿಸಿರುವುದು ಭಾರಿ ನಿರಾಸೆ ಮೂಡಿಸಿದೆ.
ಧೈರ್ಯ ತುಂಬಿದ ಪ್ರಧಾನಿ :
ಒಲಿಂಪಿಕ್ಸ್ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶ್ ಫೋಗಟ್ರನ್ನು ಪ್ರಧಾನಮಂತ್ರಿ ನರೇಂದ್ರಮೋದಿ ಚಾಂಪಿಯನ್ನರ ಚಾಂಪಿಯನ್ ಎಂದು ಬಣ್ಣಿಸುವ ಮೂಲಕ ಧಯ್ರ್ಯ ತುಂಬಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿಯವರು ಫೋಗಟ್ ಪ್ರತಿಯೊಬ್ಬ ಭಾರತೀಯರಿಗೆ ಯಾವಾಗಲೂ ಹೆಮ್ಮೆ ಮತ್ತು ಸ್ಫೂರ್ತಿ ಎಂದು ಹೇಳಿದ್ದಾರೆ.ಇಂದಿನ ಹಿನ್ನೆಡೆ ನೋವು ತಂದಿದೆ. ಆದರೆ ಹತಾಶೆಯನ್ನು ವ್ಯಕ್ತಪಡಿಸಲು ಪದಗಳು ಸಾಲುವುದಿಲ್ಲ. ಅದೇ ಸಮಯದಲ್ಲಿ ಫೋಗಟ್ ದೃಢಚಿತ್ತವನ್ನು ಹೊಂದಿರುತ್ತಾರೆ ಎಂದು ನಾನು ಭಾವಿಸುತ್ತೇನೆ.
ಸವಾಲುಗಳನ್ನು ಎದುರಿಸುವುದು ಸದಾಕಾಲ ನಿಮ ಸ್ವಭಾವವಾಗಿತ್ತು. ದೃಢತೆಯಿಂದ ವಾಪಸ್ ಬನ್ನಿ. ನಾವು ನಿಮೊಂದಿಗಿದ್ದೇವೆ ಎಂದು ಧೈರ್ಯ ಹೇಳಿದ್ದಾರೆ.

