ಬೆಂಗಳೂರು : ಬಿಜೆಪಿ ಎಂಎಲ್ ಸಿ ಸಿಟಿ ರವಿ ಅವರನ್ನು ಬಂಧಿಸಿ, ಬಿಡುಗಡೆ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಇದರಲ್ಲಿ ಯಾರದ್ದೋ ಕೈವಾಡವಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ, ಈ ಬಗ್ಗೆ ಕಾನೂನು ಹೋರಾಟ ನಡೆಸುವಂತೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಅವರು, ಸಿಟಿ ರವಿಯನ್ನು ಬಂಧಿಸಿದ ಬಳಿಕ ನೇರವಾಗಿ ಜನಪ್ರತಿನಿಧಿಗಳ ಕೋರ್ಟ್ ಗೆ ನೇರವಾಗಿ ಕರೆದೊಯ್ಯಬೇಕಿತ್ತು, ಬದಲಿಗೆ ರಾತ್ರಿ ಎಲ್ಲಾ ಸುತ್ತಾಡಿಸುವ ಅಗತ್ಯ ಏನಿತ್ತು, ಎಂದು ಪ್ರಶ್ನಿಸಿದ್ದಾರೆ.
ಸಿಟಿ ರವಿಯನ್ನು ಬಂಧಿಸುವುದರಿಂದ ಹಿಡಿದು ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವವರೆಗೆ ಪೊಲೀಸರಿಗೆ ಯಾರೋ ಡೈರೆಕ್ಷನ್ ಕೊಟ್ಟಿದ್ದಾರೆ, ಅವರು ಯಾರು ಎಂದು ಸದ್ಯದಲ್ಲೇ ಬೆಳಕಿಗೆ ಬರುತ್ತದೆ. ಯಾವುದನ್ನು ಹೆಚ್ಚು ದಿನ ಮುಚ್ಚಿಡಲು ಸದ್ಯವಿಲ್ಲ ಎಂದು ಹೆಚ್.ಡಿಕೆ ಹೇಳಿದರು.
ಅಲ್ಲದೇ ಸಿಟಿ ರವಿ ಅವರಿಗೆ ದೈಹಿಕವಾಗಿ ಹಲ್ಲೆ ಆಗಿದ್ದಲ್ಲದೆ ಮಾನಸಿಕ ಹಿಂಸೆ ಕೂಡ ಪೊಲೀಸರು ನೀಡಿದ್ದಾರೆ, ಈ ಬಗ್ಗೆ ಸೂಕ್ತ ಕಾನೂನು ಹೋರಾಟ ಮಾಡಬೇಕು, ಜೊತೆಗೆ ಇದನ್ನು ಇಟ್ಟುಕೊಂಡು ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತು ಕೂಡ ಮಾಡಬಹುದು ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

