ಜುಲೈ ತಿಂಗಳಲ್ಲಿ ಯಾವ ರಾಶಿಗೆ ಶುಭವಿದೆ. ಯಾವ ರಾಶಿಗೆ ಅಶುಭವಿದೆ. ಯಾವ ರಾಶಿಯವರು ಯಾವೆಲ್ಲಾ ಕೆಲಸಗಳು ಮಾಡಬೇಕು, ಮಾಡಬಾರದು ಅನ್ನೋದನ್ನ ನೋಡೋಣ..
ಮೇಷ ರಾಶಿ
ಈ ಮಾಸದ ಮೊದಲಲ್ಲಿ ಬುಧ ಶುಕ್ರ ಕಟಕ ರಾಶಿಗೆ ಪ್ರವೇಶವಾಗುತ್ತಾರೆ. ಮಾಸದ ಮಧ್ಯದಲ್ಲಿ ಕುಜ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ. ಗುರು ಈಗಾಗಲೇ ಎರಡನೇ ಮನೆಯಲ್ಲಿ ಇದ್ದಾನೆ. ಈಗ ನಿಮಗೆ ಅದೃಷ್ಟದ ಕಾಲ. ಭೂಮಿಯಿಂದ ಲಾಭ ಇದೆ. ರಿಯಲ್ ಎಸ್ಟೇಟ್ ನವರಿಗೆ ಲಾಭ ಇದೆ. ವ್ಯಾಪಾರ ವ್ಯವಹಾರಗಳು ಜೋರಾಗಿ ನಡೆಯುತ್ತದೆ. ವಾಹನದಿಂದ ಲಾಭ ಇದೆ. ಆಭರಣ ಖರೀದಿ ಮಾಡುವಿರಿ. ಹೊಸ ವಾಹನ ಕೊಳ್ಳುವ ಯೋಗ ಇದೆ. ವಿದ್ಯುತ್ ಸಂಬಂಧಿತ ಕೆಲಸ ಮಾಡುವವರಿಗೆ ಲಾಭ ಇದೆ. ಸರ್ಕಾರಿ ನೌಕರರಿಗೆ ಲಾಭ ಇದೆ. ನೌಕರಿಯಲ್ಲಿ ಬಡ್ತಿ, ಸ್ಥಾನಮಾನ ಸಿಗುವ ಯೋಗ ಇದೆ. ಶನಿ ಲಾಭಸ್ಥಾನದಲ್ಲಿ ಇರುವುದರಿಂದ ನಿಮಗೆ ಅಧಿಕ ಧನಲಾಭ ಉನ್ನತ ಅಧಿಕಾರ ಪ್ರಾಪ್ತಿ ಇದೆ. ಕೋರ್ಟ್ ವ್ಯಾಜ್ಯಗಳಲ್ಲಿ ನಿಮಗೆ ಜಯ ಲಭಿಸುತ್ತದೆ. ಶತ್ರುಪೀಡನೆ ದೂರವಾಗುತ್ತದೆ. ಕೌಟುಂಬಿಕವಾಗಿ ನೆಮ್ಮದಿ ಸಂತೋಷ ಇದೆ. ಉನ್ನತ ವ್ಯಾಸಂಗಕ್ಕೆ ಈಗ ಅವಕಾಶ ಒದಗಿ ಬರುತ್ತದೆ. ವಿದೇಶಕ್ಕೆ ಹೋಗುವವರಿಗೆ ಈಗ ದಾರಿ ಸುಲಭವಾಗಲಿದೆ.
ವೃಷಭ ರಾಶಿ
ನಿಮಗೆ ರಾಶಿಯಲ್ಲೇ ಗುರು ಇರುವುದು ಹಣದ ಖರ್ಚಿಗೆ ಕಾರಣವಾದರೂ ರಾಹು ಲಾಭಸ್ಥಾನದಲ್ಲಿ ಇರುವುದು ಹಣ ಬರುವುದಕ್ಕೂ ಸಹಾಯವಾಗುತ್ತದೆ. ಧನಾಗಮನ ಉತ್ತಮವಾಗಿದೆ. ಶುಭಕಾರ್ಯಕ್ಕೆ ಖರ್ಚು ಮಾಡುವ ಸಂದರ್ಭಗಳಿವೆ. ವಾರದ ಮೊದಲಲ್ಲಿ ಬುಧ ಶುಕ್ರರ ಕಟಕ ರಾಶಿ ಪ್ರವೇಶ ನಿಮಗೆ ಲಾಭ ತಂದುಕೊಡುತ್ತದೆ. ಅಕ್ಕತಂಗಿಯರು ಅಥವಾ ಸ್ತ್ರೀಯರಿಂದ ಲಾಭ ಮತ್ತು ಸಹಾಯ ಇದೆ. 14 ರ ನಂತರ ಸೂರ್ಯ ಕಟಕರಾಶಿಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಅನುಕೂಲಗಳು ಸಿಗುತ್ತದೆ. ಪರಾಕ್ರಮ ಧೈರ್ಯದಿಂದ ಯಾವ ಕೆಲಸವನ್ನೂ ಯಶಸ್ವಿಯಾಗಿ ಮಾಡುವ ಒಂದು ಬಲ ಬರುತ್ತದೆ. ನಿಮ್ಮ ರಾಶಿಯಲ್ಲೇ ಈ ಮಾಸಪೂರ್ತಿ ಗುರುವಿನ ಜೊತೆಗೆ ಕುಜನೂ ಇರುತ್ತಾನೆ. ಇದರಿಂದ ವ್ಯತಿರಿಕ್ತ ಪರಿಣಾಮಗಳು ಏನೂ ಇಲ್ಲದಿದ್ದರೂ ಯಾರ ತಂಟೆಗೂ ಹೋಗಬೇಡಿ, ನೀವಾಯಿತು ನಿಮ್ಮ ಕೆಲಸವಾಯಿತು ಎಂಬಂತೆ ಇರಿ. ಯಾರ ವಿಷಯದಲ್ಲೂ ಮೂಗು ತೂರಿಸುವುದು ಬೇಡ. ನಿಮಗೇ ವೃಥಾ ಅಪವಾದ ಮನಸ್ಸಿಗೆ ಹಿಂಸೆ ಆಗುತ್ತದೆ.
ಶನಿ ಹತ್ತನೇ ಮನೆಯಲ್ಲಿ ವೃತ್ತಿಗೆ ಭದ್ರತೆ ಕೊಡುತ್ತಾನೆ. ಈ ಮಾಸದ ಮಧ್ಯದಿಂದ ನಿಮಗೆ ಸಮಯ ಚೆನ್ನಾಗಿದೆ. ನೀವು ಅಂದುಕೊಂಡ ಕೆಲಸಗಳು ನೆರವೇರುವ ಒಂದು ದಾರಿ ಕಾಣುತ್ತದೆ. ಧನಾಗಮನ ಉತ್ತಮವಾಗುತ್ತದೆ. ಈ ಮಾಸದ ಕೊನೆಯಲ್ಲಿ ಬುಧ ನಾಲ್ಕನೇ ಮನೆಯಾದ ಸಿಂಹ ರಾಶಿಗೆ ವೇಶವಾಗುತ್ತಾನೆ. ಆಗಲೂ ಸಹ ನಿಮಗೆ ಒಳಿತೇ ಆಗುತ್ತದೆ. ವಿದ್ಯಾರ್ಥಿಗಳಿಗೆ ಈ ಮಾಸದ ಕೊನೆಯಲ್ಲಿ ಶುಭಫಲಗಳು ದೊರೆಯುತ್ತದೆ.
ಮಿಥುನ ರಾಶಿ
ನಿಮ್ಮ ರಾಶಿಯಿಂದ 12 ನೇ ಮನೆಯಲ್ಲಿ ಗುರು ಇದ್ದಾನೆ. ಇದು ಸ್ವಲ್ಪ ಮಾನಸಿಕ ಕ್ಷೋಬೆಗೆ ಕಾರಣವಾಗುತ್ತದೆ. ಗಂಡ ಹೆಂಡಿರ ನಡುವೆ ಜಗಳ ವೈಮನಸ್ಸು ವಿಕೋಪಕ್ಕೆ ಹೋಗಬಹುದು. ಮನೆಯಲ್ಲಿ ಅಶಾಂತಿಯ ವಾತಾವರಣ ಇರುತ್ತದೆ. ಜಾಗ ಬದಲಾವಣೆಯ ಒಂದು ಸೂಚನೆ ಇದೆ. ಈ ಮಾಸದ ಮೊದಲಲ್ಲಿ ಬುಧ-ಶುಕ್ರರು ಕಟಕರಾಶಿಗೆ ಪ್ರವೇಶವಾಗುತ್ತಾರೆ. ಇದರಿಂದ ನಿಮಗೆ ಆರ್ಥಿಕವಾಗಿ ಕೊಂಚ ಅನುಕೂಲ ಸಿಗುತ್ತದೆ. ಕೌಟುಂಬಿಕ ಅಶಾಂತಿ ಒಂದು ಮಿತಿಯಲ್ಲಿ ಇರುತ್ತದೆ. ವಿಕೋಪಕ್ಕೆ ಹೋಗದಂತೆ ಬುಧ ಶುಕ್ರರು ತಡೆಯುತ್ತಾರೆ. ಶನಿ ಒಂಬತ್ತನೇ ಮನೆಯಲ್ಲಿ ಇರುವುದು ಧಾರ್ಮಿಕ ಭಾವನೆಯನ್ನು ಹೆಚ್ಚಿಸುತ್ತಾನೆ. ಹತ್ತನೇ ಮನೆಯಲ್ಲಿ ರಾಹು ನೌಕರಿಯಲ್ಲಿ ಒತ್ತಡಗಳನ್ನು ಕೊಡುತ್ತಾನೆ. ಆದರೆ ರಾಸಾಯಬಿಕ, ಔಷಧೀಯ, ಇಂತಹ ವ್ಯಾಪಾರಸ್ಥರು ಲಾಭ ಕಾಣುತ್ತಾರೆ. ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡುತ್ತೀರಿ. ಅಂದುಕೊಂಡಿದ್ದ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತದೆ. ಜಾಗ ಬದಲಾವಣೆಯ ಸೂಚನೆ ಇರುವುದರಿಂದ ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಒಳ್ಳೆಯ ದಶಾಭುಕ್ತಿ ನಡೆಯುತ್ತಿದ್ದರೆ ಹೊಸ ಮನೆ ಕಟ್ಟಬಹುದು ಅಥವಾ ಮನೆ ಕೊಳ್ಳಬಹುದು. ವಾಸಸ್ಥಾನ ಅಥವಾ ನೌಕರಿ ಬದಲಾಯಿಸಬಹುದು. ಈ ತಿಂಗಳು ನಿಮಗೆ ಕೆಡುಕೂ ಇಲ್ಲದೆ ತೀರಾ ಒಳ್ಳೆಯದೂ ಇಲ್ಲದೆ ಮಧ್ಯಮವಾಗಿ ನಡೆಯುತ್ತದೆ.
ಕಟಕ ರಾಶಿ
ನಿಮ್ಮ ರಾಶಿಗೆ ಈಗ ಗುರುಬಲ ಇದೆ. ಕಳೆದ ಒಂದು ವರ್ಷದಿಂದ ಅಷ್ಠಮ ಶನಿಯ ಪ್ರಭಾವಕ್ಕೆ ಸಿಕ್ಕು ನೀವು ಬಹಳ ನರಳಿದ್ದೀರಿ. ಕೆಲಸ ಕಾರ್ಯಗಳು ಯಾವುದೂ ನೀವು ಅಂದುಕೊಂಡಂತೆ ನಡೆದಿಲ್ಲ. ಕೆಲಸ ಕಾರ್ಯಗಳಲ್ಲಿ ವಿಘ್ನಗಳು, ನೌಕರಿಯಲ್ಲಿ ಕಿರಿಕಿರಿ, ಮನೆಯಲ್ಲಿ ಅಶಾಂತಿ, ಇವೆಲ್ಲವನ್ನೂ ಅನುಭವಿಸಿದ್ದೀರಿ. ಆದರೆ ಕಳೆದ ತಿಂಗಳಿಂದ ಗುರುಬಲ ಬಂದಿರುವುದರಿಂದ ನಿಮಗೆ ಕೊಂಚ ನಿರಾಳ. ಜೀವಕಾರಕ ಗುರು ಈಗ ನಿಮಗೆ ಲಾಭಸ್ಥಾನದಲ್ಲಿ ಇದ್ದು ನಿಮ್ಮ ಎಲ್ಲ ಅನುಕೂಲಗಳನ್ನು ಒದಗಿಸಿಕೊಡುತ್ತಾನೆ. ಹಣಕಾಸಿನ ಸ್ಥಿತಿಯನ್ನು ಉತ್ತಮಪಡಿಸುತ್ತಾನೆ. ಧನಾಗಮನ ಉತ್ತಮವಾಗಿದೆ. ಅವಿವಾಹಿತರಿಗೆ ವಿವಾಹ ಪ್ರಾಪ್ತಿ ಇದೆ. ಅಷ್ಠಮಶನಿಯ ಪ್ರಭಾವ ಇನ್ನೂ ಇರುವುದರಿಂದ ಅಲ್ಪಸ್ವಲ್ಪ ಅಡೆತಡೆಗಳು ಬರುತ್ತಿರುತ್ತದೆ. ಎದೆಗುಂದಬೇಡಿ ಆ ತಡೆಗಳಿಗೆ ಪರಿಹಾರಗಳು ದೊರೆತು ನಿಮ್ಮ ದಾರಿ ಸುಗಮವಾಗುತ್ತದೆ. ಈ ತಿಂಗಳ ಮೊದಲ ವಾರದಲ್ಲಿ ಬುಧ ಶುಕ್ರರು ನಿಮ್ಮ ರಾಶಗೆ ಬರುತ್ತಾರೆ. ಇದು ಕೂಡ ನಿಮಗೆ ಒಳಿತನ್ನು ಮಾಡುತ್ತದೆ. ನಿಮ್ಮ ಧನಾತ್ಮಕ ಶಕಿಯನ್ನು ಹೆಚ್ಚುಮಾಡುತ್ತದೆ. ನಿಮ್ಮ ಸಂಕಷ್ಟಗಳಿಗೆ ನೀವೇ ಒಂದು ದಾರಿ ಕಂಡುಕೊಳ್ಳುವಂತೆ ಮಾಡುತ್ತದೆ. ಸಂಪನ್ಮೂಲಗಳನ್ನು ನೀವು ಗುರ್ತಿಸುವಂತೆ ಮಾಡುತ್ತದೆ. ಒಟ್ಟಾರೆಯಾಗಿ ಈ ತಿಂಗಳು ನಿಮಗೆ ಒಳ್ಳೆಯಫಲಗಳೆ ಹೆಚ್ಚು ಇದೆ.
ಸಿಂಹ ರಾಶಿ
ಈಗ ಗುರು ನಿಮಗೆ ಹತ್ತನೇ ಮನೆಯಲ್ಲಿ ಇದ್ದಾನೆ. ಇದು ನಿಮಗೆ ಕೊಂಚ ಒತ್ತಡಗಳನ್ನು ಕೊಡುತ್ತದೆ. ವೃತ್ತಿಯಲ್ಲೂ ಕೊಂಚ ಏರುಪೇರುಗಳಾಗಬಹುದು. ಮೇಲಾಧಿಕಾರಿಗಳ ಮಾತನ್ನು ಶಿರಸಾವಹಿಸಿ ಪಾಲಿಸಿ. ನೀವು ಬಹಳ ಆತ್ಮಗೌರವ ಹಾಗೂ ಸ್ವಾಭಿಮಾನದ ಸ್ವಭಾವದವರು.ಯಾರಿಗಾದರೂ ತಲೆತಗ್ಗಿಸುವುದು ನಿಮಗೆ ಆಗದು. ನಿಮ್ಮ ರಾಶಿಯ ಅಧಿಅಪತಿ ಸೂರ್ಯ ಗ್ರಹಗಳ ರಾಜ ಹೀಗಾಗಿ ನೀವೂ ಕೂಡ ರಾಜಸ್ವ ಸ್ವಭಾವದವರು. ಆದರೆ ಪರಿಸ್ಥಿತಿ ನಿಮಗೆ ವ್ಯತಿರಿಕ್ತವಾಗಿರುವಾಗ ನೀವು ಕೆಲವೊಮ್ಮೆ ತಲೆಬಾಗಬೇಕಾಗುತ್ತದೆ. ಧರ್ಮರಾಯ ಕೂಡ ತಲೆಬಾಗಿದ್ದಾನೆ ಹೀಗಾಗಿ ಬಾಗುವುದರಲ್ಲಿ ಅವಮಾನ ಇಲ್ಲ. ಬಾಗಿ ಮತ್ತೆ ಇನ್ನಷ್ಟು ಬೆಳೆಯಿರಿ. ಈಗ ನಿಮಗೆ ಎಲ್ಲ ಗ್ರಹಗಳೂ ವ್ಯತಿರಿಕ್ತವಾಗಿಯೇ ಇದೆ. ಹಾಗಾಗಿ ಒತ್ತಡಗಳು ಯಾವ ಯಾವ ಮೂಲದಿಂದ ಬರುವುದೋ ಹೇಳಲಾಗುವುದಿಲ್ಲ. ಶನಿ ನಿಮ್ಮ ರಾಶಿಯನ್ನು ನೇರವಾಗಿ ನೋಡುತ್ತಿದ್ದಾನೆ. ಹೀಗಾಗಿ ಮಾನಸಿಕ ಕ್ಷೋಭೆ ಹೆಚ್ಚು. ಇದರಿಂದ ಕೋಪತಾಪಗಳೂ ಹೆಚ್ಚಾಗುತ್ತದೆ. ಬುಧ ಶುಕ್ರರು ವ್ಯಯಸ್ಥಾನದಲ್ಲಿ ಇರುವುದರಿಂದ ಖರ್ಚು ಹೆಚ್ಚಾಗಿಯೇ ಇರುತ್ತದೆ. ಎರಡನೇ ಮನೆಯಲ್ಲಿ ಕೇತು ಇರುವುದು ಸಂಸಾರದಲ್ಲಿ ಬಿಕ್ಕಟ್ಟು ತೋರಿಸುತ್ತದೆ. ಎಂಟನೇ ಮನೆಯಲ್ಲಿ ರಾಹು ಆರೋಗ್ಯ ವೈಪರೀತ್ಯ ಮಾಡುತ್ತಾನೆ. ಹಾಗಾಗಿ ನೀವು ಹೆಜ್ಜೆಹೆಜ್ಜೆಗೂ ಜಾಗರೂಕರಾಗಿರಬೇಕು. ವಿಷ್ಣುಸಹಸ್ರನಾಮ ಪ್ರತಿದಿನ ಹೇಳಿಕೊಳ್ಳಿ. ಮಾನಸಿಕ ಶಕ್ತಿ ಹೆಚ್ಚಾಗುತ್ತದೆ.
ಕನ್ಯಾ ರಾಶಿ
ಈಗ ನಿಮಗೆ ಅದೃಷ್ಟದ ಕಾಲ. ಗುರು ಭಾಗ್ಯಸ್ಥಾನದಲ್ಲಿ ಭಾಗ್ಯಗಳನ್ನು ಕೊಡುತ್ತಾನೆ. ಸಕಲ ವಿಧದಲ್ಲಿಯೂ ಒಳ್ಳೆಯದನ್ನು ಮಾಡುತ್ತಾನೆ. ಪುಣ್ಯ ಕಾರ್ಯ ಮಾಡಿಸುತ್ತಾನೆ. ಯಾತ್ರಾಸ್ಥಳಗಳನ್ನು ಭೇಟಿ ಮಾಡುತ್ತೀರಿ. ಆರನೇ ಮನೆಯಲ್ಲಿ ಶನಿ ಅಪಾರ ಧನಲಾಭ ಮಾಡಿಸುತ್ತಾನೆ. ಮೂರು, ಆರು, ಹನ್ನೊಂದನೇ ಮನೆಯಲ್ಲಿ ಪಾಪ ಗ್ರಹಗಳು ಬಹಳ ಲಾಭ ಕೊಡುತ್ತಾರೆ. ಈ ತಿಂಗಳ ಮೊದಲ ವಾರದಿಂದಲೇ ಬುಧ ಶುಕ್ರರು ಲಾಭಸ್ಥಾನಕ್ಕೆ ಪ್ರವೇಶವಾಗುತ್ತಾರೆ. ಇದೂ ಸಹ ನಿಮಗೆ ಉತ್ತಮರೀತಿಯಲ್ಲಿ ಸಹಾಯ ಮಾಡುತ್ತದೆ. ಧನಲಾಭ, ಮಿತ್ರರಿಂದ ಲಾಭ, ಮಿತ್ರರ ಸಹಾಯ ಹೀಗೆ ಬಹಳಷ್ಟು ಲಾಭಗಳು ಇವೆ. ಎಲ್ಲರಿಂದಲೂ ಹೊಗಳಿಸಿಕೊಳ್ಳುವ ಯೋಗ ಈಗ ನಿಮಗೆ. ನಿಮ್ಮ ಮಾತು ತುಂಬಾ ಪ್ರಭಾವಶಾಲಿಯಾಗಿರುತ್ತದೆ. ನಿಮ್ಮ ರಾಶಿಯಲ್ಲಿ ಕೇತು ಹಾಗೂ ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ರಾಹು ಇರುವುದು ಮಾತ್ರ ಕೊಂಚ ತೊಂದರೆ. ನಿಮ್ಮ ಹಾಗೂ ನಿಮ್ಮ ಸಂಗಾತಿಯ ಆರೋಗ್ಯದಲ್ಲಿ ಕಾಳಜಿ ವಹಿಸಿ. ವಿಷವಸ್ತುಗಳು ಹರಿತ ವಸ್ತುಗಳಿಂದ ದೂರವಿರಿ. ಎಂಟನೇ ಮನೆಯಲ್ಲಿ ಕುಜ ಇರುವುದು ಕೂಡ ಸ್ವಲ್ಪ ಹಿನ್ನಡೆ ಕೊಡುತ್ತದೆ. ಭೂಮಿ ವ್ಯವಹಾರಗಳನ್ನು ಜಾಗರೂಕವಾಗಿ ಮಾಡಿ. ನಷ್ಟ ಹೋಗುವ ಸಾಧ್ಯತೆ ಇದೆ. ಗುಣಾತ್ಮಕ ಸಂಗತಿಗಳೊಂದಿಗೆ ಕೊಂಚ ಅಪಾಯಗಳನ್ನೂ ಎದುರಿಸಬೇಕಾಗುತ್ತದೆ. ಮೈಮರೆಯಬೇಡಿ.

