ನವದೆಹಲಿ: ದುರಸ್ತಿಗಾಗಿ ಖಾಸಗಿ ಹೆಲಿಕಾಪ್ಟರ್ ನ್ನು ಏರ್ ಲಿಫ್ಟ್ ಮಾಡುತ್ತಿದ್ದಾಗ ಪತನಗೊಂಡ ಘಟನೆ ಉತ್ತರಾಖಂಡದ ಕೇದಾರನಾಥದಲ್ಲಿ ನಡೆದಿದೆ.ಈ ಕುರಿತ ವಿಡಿಯೋವೊಂದು ಕೂಡ ವೈರಲ್ ಆಗಿದೆ.
ಕೇದಾರನಾಥ ಹೆಲಿಪ್ಯಾಡ್ನಿಂದ ಗೋಚಾರ್ ಹೆಲಿಪ್ಯಾಡ್ಗೆ ಮತ್ತೊಂದು ಹೆಲಿಕಾಪ್ಟರ್ ಮೂಲಕ ತಾಂತ್ರಿಕ ದೋಷ ಹೊಂದಿದ್ದ ಹೆಲಿಕಾಪ್ಟರ್ನ್ನು ಏರ್ಲಿಫ್ಟ್ ಮಾಡುತ್ತಿದ್ದ ವೇಳೆ ರಭಸದಿಂದ ಬೀಸುತ್ತಿದ್ದ ಗಾಳಿಯನ್ನು ನಿಯಂತ್ರಣ ಮಾಡಲಾಗದೇ ಪತನಗೊಂಡಿದೆ ಎಂದು ಹೇಳಲಾಗಿದೆ. ಇನ್ನು ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೌರಿಕುಂಡ್ನಿಂದ ಕೇದಾರನಾಥಕ್ಕೆ ಹೋಗುವ ಮಾರ್ಗದಲ್ಲಿ ಮಳೆಯಿಂದ ಭೂಕುಸಿತ ಕಂಡಿದ್ದು, ಸಾವಿರಾರು ಜನರು ಇಲ್ಲಿ ಸಿಲುಕಿಕೊಂಡಿದ್ದಾರೆ, ಖಾಸಗಿ ಹೆಲಿಕಾಪ್ಟರ್ಗಳಲ್ಲದೆ ವಾಯುಪಡೆಯ ಚಿನೂಕ್ ಮತ್ತು MI17 ಹೆಲಿಕಾಪ್ಟರ್ಗಳ ಸಹಾಯದಿಂದ ಅವರ ರಕ್ಷಣೆ ಮಾಡಲಾಗುತ್ತಿದೆ. ಆಗಸ್ಟ್ನಲ್ಲಿ ಚಾರಣ ಮಾರ್ಗವನ್ನು ನಿರ್ಬಂಧ ಹೇರಲಾಗಿದ್ದು, ಅದರೂ ಜನರು ಹೆಲಿಕಾಪ್ಟರ್ ಮೂಲಕ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ.
ಮೇ ತಿಂಗಳ ಆರಂಭದಲ್ಲಿ, ಕೆಸ್ಟ್ರೆಲ್ ಏವಿಯೇಷನ್ ಒಡೆತನದ ಮತ್ತು ವಿಟಿ-ಸಿಎಲ್ಆರ್ ಕಾಲ್ಸೈನ್ ಹೊಂದಿರುವ ಲಿಯೊನಾರ್ಡೊ ಎ 119 ಕೋಲಾ ಹೆಲಿಕಾಪ್ಟರ್ ಇಳಿಯಲು ಕೇದಾರನಾಥ ಹೆಲಿಪ್ಯಾಡ್ ಬಳಿ ಬಂದಾಗ ನಿಯಂತ್ರಣ ಕಳೆದುಕೊಂಡಿತು. ಹೆಲಿಕಾಪ್ಟರ್ ನಲ್ಲಿ ಆರು ಪ್ರಯಾಣಿಕರಿದ್ದರು. ಹೆಲಿಪ್ಯಾಡ್ನಿಂದ ಸುಮಾರು 100 ಮೀಟರ್ ದೂರದಲ್ಲಿ ಪೈಲಟ್ ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದ್ದರು.

