ಬೆಂಗಳೂರು: ನಾನು ಮನೆಯಲ್ಲಿ ಇನ್ನು ಸುಮ್ಮನೆ ಮಲಗುವುದಿಲ್ಲ. ಪಕ್ಷ ಸಂಘಟನೆ ಹಾಗೂ ಜನಪರ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಗುಡುಗಿದರು.
ಬೆಂಗಳೂರಿನಲ್ಲಿ ಶನಿವಾರ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಎಲ್ಲಾ ಕಡೆಗಳಲ್ಲಿ ಪ್ರವಾಸ ಮಾಡುತ್ತೇನೆ. ಪಕ್ಷದ ಕಚೇರಿಗೂ ಬರುತ್ತೇನೆ. ಎನ್ಡಿಎ ಮೈತ್ರಿ ಕೂಟದಲ್ಲಿ ನಾವು ಸೇರಿದ್ದು, ಜೆಡಿಎಸ್ ಪಕ್ಷ ಮೈತ್ರಿಗೆ ಯಾವುದೇ ಧಕ್ಕೆ ತರುವುದಿಲ್ಲ ಎಂದರು.
ಮತ್ತೆ ಹೋರಾಟ ಮಾಡುತ್ತೇನೆ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಾಗೂ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕೂತು ಯಾವ ದೇವೇಗೌಡರು ಹೋರಾಟ ಮಾಡಿದ್ದರೋ ಅದೇ ದೇವೇಗೌಡರು ಈಗ ಮತ್ತೆ ಹೋರಾಟಕ್ಕೆ ಅಣಿಯಾಗಿ ನಿಂತಿದ್ದಾರೆ ಎಂದು ಅವರು ಹೇಳಿದರು.
62 ವರ್ಷ ಶಾಸಕನಾಗಿ, ವಿರೋಧ ಪಕ್ಷದ ನಾಯಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ಮೂರು ತಿಂಗಳ ಕಾಲ ಮನೆಯಲ್ಲಿಯೇ ಮಲಗಿಸಿಬಟ್ಟರು, ನಾನು ಈ ದೇಶದಲ್ಲಿ ತಲೆಮರೆಸಿಕೊಳ್ಳುವ ರಾಜಕಾರಣಿ ಆಗಿದ್ನಾ? ಎಂದು ಖಾರವಾಗಿ ಪ್ರಶ್ನಿಸಿದರು.
ಪಕ್ಷದ ಸದಸ್ಯತ್ವ ಅಭಿಯಾನದ ವಿಚಾರಕ್ಕೆ ಮಾತನಾಡಿದ ಅವರು; ಇವತ್ತು ಪಾರ್ಟಿ ಆಫೀಸ್ ಗೆ ಬಂದಿದ್ದೇನೆ. ಕುಮಾರಸ್ವಾಮಿ ಅವರೂ ಬಂದಿದ್ದಾರೆ. ಅವರು ಪ್ರತಿದಿನ ಬರಲು ಆಗಲ್ಲ. ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬುಗೆ ಜವಾಬ್ದಾರಿ ಕೊಟ್ಟಿದ್ದಾರೆ. ಪ್ರತಿ ಜಿಲ್ಲೆಗೆ ಹೋಗಿ ಸದಸ್ಯತ್ವ ಬಗ್ಗೆ ಗಂಭೀರವಾಗಿ ಅಭಿಯಾನ ಮಾಡ್ತಿದ್ದಾರೆ. ನಾನು ಕೂಡ ಬೇರೆ ಬೇರೆ ಕಡೆ ಪ್ರವಾಸ ಕೂಡ ಮಾಡುತ್ತೇನೆ ಎಂದರು.
ನನ್ನನ್ನು ಮುಗಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಎದುರಿಸಿ ಹೋರಾಟ ಮಾಡುತ್ತೇನೆ. ಕಾರ್ಯಕರ್ತರ ಜತೆ ಓಡಾಡಿಕೊಂಡೆ ಪಕ್ಷ ಕಟ್ಟುತ್ತೇನೆ ಎಂದು ಅವರು ಹೇಳಿದರು.

